ಮಂಗಳೂರಿನಲ್ಲಿ ಶೀಘ್ರವೇ ಸೈಬರ್ ಲ್ಯಾಬ್ ಸ್ಥಾಪನೆ
ಮಾಹಿತಿಯ ಸುರಕ್ಷತೆ, ಗೌಪ್ಯತೆ, ಸಮಗ್ರತೆ ಹಾಗೂ ಲಭ್ಯತೆ ಮಾಹಿತಿ ತಂತ್ರಜ್ಞಾನ ಉದ್ದಿಮೆಗಳ ಮೂಲ ತತ್ವಗಳು. ಇವುಗಳಲ್ಲಿ ಒಂದು ಅಂಶಕ್ಕೆ ಧಕ್ಕೆಯಾದರೂ ಸಹ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಐಟಿ ಕಾಯಿದೆ ಒಂದು ಮಹತ್ವದ ಹೆಜ್ಜೆ. 2009ರಲ್ಲಿ ಈ ಕಾಯ್ದೆಗೆ ಮಾಡಿರುವ ತಿದ್ದುಪಡಿಗಳೂ ಪ್ರಸ್ತುತವಾಗಿವೆ ಎಂದು ಅಖಿಲಾ ಅಭಿಪ್ರಾಯಪಟ್ಟರು.
ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಮನೋಳಿ ಅವರು ಮಾತನಾಡಿ, ಬೆಂಗಳೂರಿನ ಸೈಬರ್ ಲ್ಯಾಬ್ನ ಕಾರ್ಯನಿರ್ವಹಣೆ ಬಗೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಮಂಗಳೂರಿನಲ್ಲಿ ಇನ್ನೊಂದು ಸೈಬರ್ ಲ್ಯಾಬ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಭವಿಷ್ಯದ ಯುದ್ಧ ಸೈಬರ್ ಯುದ್ಧವಾಗಿರುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದು, ಇದಕ್ಕೆ ಪೂರಕವಾಗಿ ಸೈಬರ್ ಭಯೋತ್ಪಾದನೆಯೂ ನಮ್ಮ ಸುತ್ತಮುತ್ತ ಬೆಳೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ, ನಾಸ್ಕಾಂ ಹಾಗೂ ಐಟಿ ಸಂಸ್ಥೆಗಳು ಜೊತೆಯಾಗಿ ಸೈಬರ್ ಅಪರಾಧಗಳ ಹುಟ್ಟಡಗಿಸುವ ಬಗ್ಗೆ ಚಿಂತನೆ ನಡೆಸಿ, ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರವು "ಸಿಂಗಲ್ ಸ್ಟಾಪ್ ಸರ್ವಿಸ್ ಪ್ರೊವೈಡರ್"ನ್ನು ಸ್ಥಾಪಿಸಲು ಸಿದ್ಧವಿದೆ. ಮೂಲಸೌಲಭ್ಯ ಮತ್ತು ಆರ್ಥಿಕ ನೆರವನ್ನು ಇದಕ್ಕೆ ಸರ್ಕಾರವೇ ಒದಗಿಸಲಿದೆ. ತಾಂತ್ರಿಕ ನೆರವನ್ನು ನಾಸ್ಕಾಂ ನೀಡಿದರೆ, ಐಟಿ ಸಂಸ್ಥೆಗಳು ಇದನ್ನು ಮುನ್ನಡೆಸಲು ಮುಂದೆ ಬರಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಐಡಿ ಡಿಜಿಪಿ ಡಾ.ಡಿ.ವಿ. ಗುರುಪ್ರಸಾದ್ ಅವರು ಮಾತನಾಡಿ, ಸೈಬರ್ ಅಪರಾಧಗಳ ಬಗ್ಗೆ ಪೊಲೀಸರಲ್ಲಿ, ಜನಸಾಮಾನ್ಯರಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳ ಅಗತ್ಯವಿದೆ. ಪೊಲೀಸರಿಗೆ ಸೈಬರ್ ಅಪರಾಧ ಪ್ರಕರಣಗಳ ತನಿಖೆಯ ಬಗ್ಗೆ ಹೆಚ್ಚಿನ ತರಬೇತಿ ನೀಡಲು ಐಟಿ ಉದ್ದಿಮೆಗಳು ನೆರವಾಗಬೇಕು ಎಂದು ಮನವಿ ಮಾಡಿದರು. ಸೈಬರ್ ಅಪರಾಧಗಳ ಬಗ್ಗೆ ಜನಸಾಮಾನ್ಯರಲ್ಲಿರುವ ಅಜ್ಞಾನದ ಕುರಿತು ನಿದರ್ಶನಗಳೊಂದಿಗೆ ವಿವರಿಸಿದ ಅವರು, ಈ ಅಪರಾಧಗಳಿಗೆ ತುತ್ತಾದವರಿಗೂ ಎಷ್ಟೋ ಬಾರಿ ಇದರ ಅರಿವಿರುವುದಿಲ್ಲ ಎಂದು ತಿಳಿಸಿದರು. ಇ-ಆಡಳಿತವನ್ನು ಜಾರಿಗೆ ತರುತ್ತಿರುವ ಸರ್ಕಾರವೂ ಮಾಹಿತಿ ಸೋರಿಕೆ ಬಗ್ಗೆ ಜಾಗರೂಕತೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.