Get Updates
Get notified of breaking news, exclusive insights, and must-see stories!

ಮಾಗಡಿಯಲ್ಲಿ ಮಸ್ತ್ ಮಸ್ತ್ ಕುಸ್ತಿ ಕಾಳಗ

Wretling competition in Magadi
ರಾಮನಗರ, ಡಿ. 27 : ಒಂದಾನೊಂದು ಕಾಲದಲ್ಲಿ ಕುಸ್ತಿಯಂತಹ ಕಲೆ ರಾಜಮಹಾರಾಜರುಗಳ ಆಶ್ರಯದಲ್ಲಿ ಗತವೈಭವ ಮೆರೆದಿತ್ತು. ಕಾಲಘಟ್ಟದಲ್ಲಿ ಕುಸ್ತಿ, ಮಲ್ಲಯುದ್ದ, ಗರಡಿ ಮನೆಗಳಂತಹ ಗ್ರಾಮೀಣ ಸಾಹಸ ಕಲೆಗಳು ಮರೆಯಾಗುತ್ತಾ ಬಂದಿದೆ. ಕಾಲ ಎಷ್ಟೇ ಬದಲಾದರೂ ಪೂರ್ವಿಕರ ಕಾಲದ ಕುಸ್ತಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ನಾಡಪ್ರಭು ಕೆಂಪೇಗೌಡರ ತವರು ರಾಮನಗರ ಜಿಲ್ಲೆ ಮಾಗಡಿಯ ನಾಡಪ್ರಭು ಕೆಂಪೇಗೌಡರ ಅಖಾಡದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ಜಿದ್ದಾಜಿದ್ದಿನ ಮಾರ್ಪಿಟ್ ಕುಸ್ತಿಪಟುಗಳು ಮತ್ತು ಸಾದಾ ಕುಸ್ತಿ ಪಟುಗಳು ಮೈನವಿರೇಳಿಸುವ ಪ್ರದರ್ಶನ ನೀಡಿದರು. ಕುಸ್ತಿ ಪಂದ್ಯಾವಳಿಯಿಂದ ಕೆಂಪೇಗೌಡರ ಕಾಲದ ಗತಕಾಲದ ವೈಭವ ಮತ್ತೆ ಮರುಕಳಿಸಿದಂತಿತ್ತು.

ಕಿಕ್ಕಿರಿದು ತುಂಬಿದ್ದ ಸಾವಿರಾರು ಮಂದಿಯ ಚಪ್ಪಾಳೆ, ಶಿಳ್ಳೆ, ಕೂಗಾಟಗಳು ಮಾಗಡಿ ಕೆಂಪೇಗೌಡರ ಅಖಾಡದಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯ ಜಗಜಟ್ಟಿಗಳಿಗೆ ಉತ್ಸಾಹ ಇಮ್ಮಡಿಗೊಳಿಸುತ್ತಿತ್ತು. ಗರಡಿ ಮನೆಯ ಮಟ್ಟಿ ಮನೆಯಲ್ಲಿ ಕಸರತ್ತು ಮಾಡಿ ಖಡಕ್ ದೇಹದಾರ್ಡ್ಯ ಹೊಂದಿರುವ ಕುಸ್ತಿಪಟು ತನ್ನ ಎದುರಾಳಿಯನ್ನು ಬಗ್ಗುಬಡಿಯುವ ವಿಶ್ವಾಸ, ಎದುರಾಳಿಗೆ ಲಡತ್ ಕೊಟ್ಟು ಮಣ್ಣು ಮುಕ್ಕಿಸುವ ಪರಿ, ಇವೆಲ್ಲವುದಕ್ಕೆ ಸಾಕ್ಷಿಯಾಗಿದ್ದು ಮಾಗಡಿಯಲ್ಲಿ ನಡೆದ ಕುಸ್ತಿ ಪಂದ್ಯಾವಳಿ.

ರಾಮನಗರ ಜಿಲ್ಲೆ ಮಾಗಡಿಯ ಮಾಜಿ ಸಚಿವ ಎಚ್.ಎಂ.ರೇವಣ್ಣನವರು ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯೋಜಿಸಿದ್ದರು. ನಾಡಪ್ರಭು ಕೆಂಪೇಗೌಡರ ತವರಿನಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಮಾರ್ಪಿಟ್ ಜಿದ್ದಾಜಿದ್ದಿನ ಕುಸ್ತಿ ಮತ್ತು ಸಾದಾಕುಸ್ತಿ ಪಂದ್ಯಗಳು ನಡೆದವು.

ಕುಸ್ತಿ ಪಂದ್ಯಗಳನ್ನು ಪ್ರತ್ಯಕ್ಷವಾಗಿ ನೋಡುವುದು ಅಪರೂಪವಾಗಿರುವ ಸಂದರ್ಭದಲ್ಲಿ ಮಾಗಡಿ ಕೆಂಪೇಗೌಡರ ಅಖಾಡದಲ್ಲಿ ನಡೆದ ಜಿದ್ದಾಜಿದ್ದಿನ ಜಟ್ಟಿಗಳ ಕಾಳಗ ಕುಸ್ತಿಪ್ರಿಯರಿಗೆ ರಸದೌತಣವಾಗಿತ್ತು. ಪೈಲ್ವಾನರುಗಳ ಕಸರತ್ತು, ಲಡತ್‌ಗಳನ್ನ ನೋಡಲು ಮೈಸೂರು ದಸರಾಗೆ ಹೋಗುತ್ತಿದ್ದ ಕುಸ್ತಿ ಪ್ರಿಯರಿಗೆ ತಮ್ಮ ಸ್ವಸ್ಥಳದಲ್ಲೇ ನೋಡುವ ಅವಕಾಶ ಸಿಕ್ಕಿತ್ತು.

ಕ್ರಿಕೆಟ್, ಟೆನಿಸ್ ಮತ್ತಿತರ ಕ್ರೀಡೆಗಳಿಗೆ ಸಿಕ್ಕಂತಹ ಪ್ರೋತ್ಸಾಹ ಕುಸ್ತಿ ಕ್ರೀಡೆಗೆ ಸರ್ಕಾರ ನೀಡುತ್ತಿಲ್ಲ. ಆದ್ದರಿಂದ ಎಷ್ಟೋ ಕುಸ್ತಿ ಪಟುಗಳು ತಮ್ಮಲ್ಲಿ ಸಾಮರ್ಥ್ಯವಿದ್ದರೂ ಎಲೆಮರೆಯ ಕಾಯಿಯಂತೆಯೇ ಉಳಿದಿದ್ದಾರೆ. ಪ್ರೋತ್ಸಾಹವೇ ಇಲ್ಲದೇ ಸೊರಗುತ್ತಿರುವ ಕುಸ್ತಿ ಕ್ರೀಡೆ ದಿನೇ ದಿನೇ ಮರೆಯಾಗುತ್ತಿದೆ. ಸರ್ಕಾರ ಪ್ರತಿ ಹಳ್ಳಿಗಳಲ್ಲಿ ಗರಡಿ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ ಪ್ರೋತ್ಸಾಹ ನೀಡಿದರೆ ಗರಡಿ ಸಂಸ್ಕೃತಿ ಮತ್ತು ಕುಸ್ತಿ ಮಲ್ಲಯುದ್ದ, ದೊಣ್ಣೆವರಸೆ, ಕತ್ತಿ ಗುರಾಣಿ ವರಸೆಗಳಂತಹ ಗ್ರಾಮೀಣ ಸಾಹಸ ಕ್ರೀಡೆಗಳು ಉಳಿಯಲು ಸಾಧ್ಯವಾಗುತ್ತದೆಂಬುದು ಪೈಲ್ವಾನರುಗಳ ಆಗ್ರಹವಾಗಿದೆ.

ಕುಸ್ತಿ ಪಂದ್ಯಾವಳಿ ಸಂದರ್ಭದಲ್ಲಿ 101 ಹಳೇ ಪೈಲ್ವಾನರುಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಒಟ್ಟು 30 ಜೋಡಿ ಭಾಗವಹಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಕುಸ್ತಿಪಟುಗಳು ಭಾಗವಹಿಸಿದ್ದರು.

ದೊಡ್ಡ ಮೀಸೆಯ ಹಳೆಯ ಪೈಲ್ವಾನರುಗಳ ಓಡಾಟವೂ ಕುಸ್ತಿ ಅಖಾಡಕ್ಕೆ ಮೆರುಗು ನೀಡಿತ್ತು. ಕ್ರಿಕೆಟ್ ಮೇನಿಯಾದ ನಡುವೆಯೂ ಎಚ್.ಎಂ.ರೇವಣ್ಣ ಮತ್ತು ಎ.ಮಂಜುರವರ ನೇತೃತ್ವದಲ್ಲಿ ನಡೆದ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಸಾವಿರಾರು ಮಂದಿ ಸೇರಿ ಪಂದ್ಯಾವಳಿಯನ್ನ ಯಶಸ್ಸುಗೊಳಿಸಿದರು. ಕುಸ್ತಿ ಅಖಾಡದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣನವರು ಮೈಕ್ ಹಿಡಿದು ಕಾಮೆಂಟರಿ ಮಾಡುತ್ತಾ ಕುಸ್ತಿಪಟುಗಳಿಗೆ ಪ್ರೋತ್ಸಾಹಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+