ವಿಷಕಾರಕ ಎಂಡೋಸಲ್ಫಾನ್ ನಿಷೇಧಕ್ಕೆ ಆಗ್ರಹ
ಎಂಡೋಸಲ್ಫಾನ್ ಸಿಂಪಡನೆಯಿಂದ ಮಕ್ಕಳು ಹುಟ್ಟುಕುರುಡರಾಗಿ, ಅಂಗವಿಕಲರಾಗಿ, ಕ್ಯಾನ್ಸರ್ ಪೀಡಿತರಾಗಿ ಜನಿಸುತ್ತಿದ್ದಾರೆ. ಅದರ ಸಿಂಪಡನೆಯಿಂದ ನೆಲ, ನೀರು, ವಾಯು ವಿಷಪೂರಿತವಾಗುತ್ತಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ಮತ್ತು ಪುತ್ತೂರು ಹಳ್ಳಿಗಳಲ್ಲಿ ಎಂಡೋಸಲ್ಫಾನ್ ಬಳಕೆಯಿಂದಾಗಿ 137 ಜನ ಸಾವಿಗೀಡಾಗಿದ್ದಾರೆ, 300ಕ್ಕೂ ಹೆಚ್ಚು ಜನ ಅಂಗವಿಕಲರಾಗಿದ್ದಾರೆ. ಇದು ಇವೆರಡು ಹಳ್ಳಿಗಳ ಕಥೆ ಮಾತ್ರ.
ಎಂಡೋಸಲ್ಫಾನ್ ಬಳಕೆಯಿಂದಾಗುವ ಅನಾಹುತದಿಂದ ಮೊದಲು ಎಚ್ಚೆತ್ತುಕೊಂಡಿದ್ದು ಕೇರಳ. ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಮರಣಮೃದಂಗ ಬಾರಿಸಿದ್ದರಿಂದ ಅದರ ಬಳಕೆಯ ತಡೆಗೆ ಕ್ರಮ ತೆಗೆದುಕೊಂಡಿತು. ಇದೇ ಅನಾಹುತ ಅಮೆರಿಕದಲ್ಲೋ ಮತ್ತಾವುದೋ ದೇಶದಲ್ಲೋ ಆಗಿದ್ದರೆ ಅದರ ಪರಿಣಾವೇ ಬೇರೆಯಾಗಿರುತ್ತಿತ್ತು.
ನಮ್ಮ ಆರೋಗ್ಯ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಎಂಡೋಸಲ್ಫಾನ್ ಬಳಕೆಯಿಂದಾಗುತ್ತಿರುವ ದುಷ್ಪರಿಣಾಮದ ಕುರಿತು ಬಂದಿರುವ ಅನೇಕ ವರದಿಗಳಿಂದ ಎಚ್ಚೆತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಅದರ ನಿಷೇಧಕ್ಕೆ ಕೇಂದ್ರಕ್ಕೆ ಮನವಿ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ. ಮಾಜಿ ಗ್ರಾಮೀಣಾಬಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಈಕುರಿತು ಎತ್ತಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ವಿರೋಧ ಪಕ್ಷದ ಶಾಸಕರು ಕೂಡ ಎಂಡೋಸಲ್ಫಾನ್ ನಿಷೇಧಕ್ಕೆ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳ ಜತೆಗಿನ ಮುಂಬರುವ ಭೇಟಿಯಲ್ಲಿ ಇದರ ಬಗ್ಗೆ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.