ತೀವ್ರಗೊಂಡ ಟಿಆರ್ಎಸ್ ಚಳವಳಿ
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖ್ಯಸ್ಥ ಕೆ ಚಂದ್ರಶೇಖರರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ದಿನ ಕಳೆದಂತೆ ಹೆಚ್ಚುತ್ತಿದ್ದು, ಈ 11 ದಿನಗಳಲ್ಲಿ ಹೈದರಾಬಾದ್ ಸೇರಿ ತೆಲಂಗಾಣದ ಪ್ರದೇಶದ 10 ಜಿಲ್ಲೆಗಳಲ್ಲಿ ಅಘೋಷಿತ ಬಂದ್ ಆಚರಿಸಲಾಗುತ್ತಿದೆ. ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ರಜೆ ಘೋಷಿಸಿವೆ. ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಒಂದಡೆ ಹೋರಾಟ ನಡೆದಿದ್ದರೆ, ಇನ್ನೊಂದಡೆ ಪ್ರತ್ಯೇಕ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸಿ ಮತ್ತೊಂದಡೆ ಪ್ರತಿಭಟನೆಗಳು ನಡೆದಿದೆ. ಎಬಿವಿಪಿ ಸಂಘಟನೆ ವಿಧಾನಸಭೆ ಮುತ್ತಿಗೆ ಹಾಕುವ ಯತ್ನ ನಡೆಸಿದೆ.
ರಾಜ್ಯಾದ್ಯಂತ ಕಾನೂನು ಸುವಸ್ಥೆಗೆ ಅಪಾಯ ಉಂಟಾಗಿದೆ. ಪರಿಸ್ಥಿತಿ ಕೈಮೀರುವ ಮುನ್ನ ಕ್ರಮ ಕೈಗೊಳ್ಳಬೇಕು ಎನ್ನುವ ಉದ್ದೇಶದಿಂದ ಸಿಎಂ ರೋಸಯ್ಯ ಅವರು ನವದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆಯಿದೆ. ವಿದೇಶ ಪ್ರವಾಸದಿಂದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇಂದು ಸ್ವದೇಶಕ್ಕೆ ಆಗಮಿಸಿದ್ದು, ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ.
ಹೋರಾಟದ ಮುಂಚೂಣಿ ನಾಯಕ ಕೆ ಚಂದ್ರಶೇಖರರಾವ್ ಅವರು ನಿಜಾಮ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಆಸ್ಪತ್ರೆಯಲ್ಲೂ ಕೆಸಿಆರ್ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದು, ಪ್ರೊಟೀನನೇಮಿಯಾದಿಂದ ಬಳಲುತ್ತಿದ್ದಾರೆ. ಅವರ ಸ್ಥಿತಿ ಅಪಾಯದಲ್ಲಿ ಮುಂದುವರೆದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
(ಏಜನ್ಸೀಸ್)