ಅಕ್ರಮ ಗಣಿಗಾರಿಕೆ : ಸಿಬಿಐ ಕೈಗೆ ಒಎಂಸಿ
ಕರ್ನಾಟಕ-ಆಂಧ್ರಪ್ರದೇಶದಲ್ಲಿ ಆರು ಗಣಿ ಕಂಪನಿಗಳು ಅದಿರು ತೆಗೆಯುವುದನ್ನು ತಕ್ಷಣವೇ ನಿಲ್ಲಸುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿ ಮಾಡಿದ ಶಿಫಾರಸ್ಸು ಆಧರಿಸಿ ಸುಪ್ರಿಂಕೋರ್ಟ್ ಗಣಿ ಕಾರ್ಯ ಸ್ಥಗಿತಗೊಳಿಸಲು ಸೂಚನೆ ನೀಡಿತ್ತು. ಅಕ್ರಮ ಗಣಿಗಾರಿಕೆ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್ ಉನ್ನತಾಧಿಕಾರ ಸಮಿತಿ ರಚಿಸಿ ಅರಣ್ಯ ಮತ್ತು ಪರಿಸರ ಕಾಯ್ದೆ ಉಲ್ಲಂಘನೆ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು.
ಅದರಂತೆ ಸಮಿತಿಯೂ ದೀರ್ಘಕಾಲ ತನಿಖೆ ನಡೆಸಿ ಸುಪ್ರಿಂಕೋರ್ಟ್ ಗೆ ವರದಿ ಸಲ್ಲಿಸಿತ್ತು. ಸಮೀಕ್ಷಾ ಕಾರ್ಯ ಪೂರ್ಣಗೊಳ್ಳುವವರೆಗೂ ಯಾವುದೇ ರೀತಿಯ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ನ್ಯಾಯಾಲಯಕ್ಕೆ ಸಮಿತಿ ಮನವಿ ಮಾಡಿಕೊಂಡಿತ್ತು. ಇದರ ಜೊತೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ ರೋಸಯ್ಯ ಕೂಡಾ ಒಎಂಸಿ ವಿವಾದವನ್ನು ಸಿಬಿಐ ತನಿಖೆ ನಡೆಸುವಂತೆ ಕೇಂದ್ರದ ಮೊರೆ ಹೋಗಿದ್ದರು.
ಕರ್ನಾಟಕದ ಪ್ರವಾಸೋಧ್ಯಮ ಸಚಿವ ಜಿ ಜನಾರ್ದನರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ. ಅರಣ್ಯ ಇಲಾಖೆ ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯಾದ್ಯಂತ ಆಂದೋಲನವನ್ನೇ ನಡೆಸಿದ್ದರು. ಇದರಿಂದ ತೀವ್ರ ಒತ್ತಡಕ್ಕೆ ಒಳಗಾದ ಅಲ್ಲಿನ ಸರಕಾರ ಓಎಂಸಿಯ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆ ನಡೆಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು.
ಮುಂದಿನ ವಾರದಿಂದ ತನಿಖೆ ಆರಂಭಗೊಳ್ಳಲಿದೆ. ಒಎಂಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾಗುವ ಸಿಬಿಐ ತನಿಖೆಗೆ ಕರ್ನಾಟಕ ಸರಕಾರ ಸಹಕರಿಸಬೇಕು ಎಂದು ಕೇಂದ್ರ ಗಣಿ ಸಚಿವ ಬಿ ಕೆ ಹಂಡಿಕ್ ಪತ್ರ ಬರೆದಿದ್ದರು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಸಿಬಿಐ ತನಿಖೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)