ಭೋಪಾಲಿನಲ್ಲಿ ಅನಿಲ ಸೋರಿಕೆ ಸ್ಮಾರಕ
1984 ಡಿಸೆಂಬರ್ 3 ಭಾರತ ಇತಿಹಾಸದ ಕರಾಳ ದಿನ. ಭೋಪಾಲ್ ನಲ್ಲಿರುವ ಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ 40 ಟನ್ ಗೂ ಹೆಚ್ಚು ಅತ್ಯಂತ ವಿಷಕಾರಕ ಮಿಥೈಲ್ ಐಸೋಸೈನೆಟ್ ಅನಿಲ ಸೋರಿಕೆಯಾಗಿ ಸುಮಾರು 8 ರಿಂದ 10 ಸಾವಿರ ಮಂದಿ ಸಾವಿಗೀಡಾದರು. ಈ ದುರಂತದಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿಯ ವಿವಿಧ ಅಂಗವೈಕಲ್ಯಕ್ಕೂ ಕಾರಣವಾಯಿತು. 72 ಗಂಟೆಗಳ ಕಾಲ ನಡೆದ ಈ ದುರ್ಘಟನೆ ಇಡೀ ಭಾರತ ಎದುರಿಸಿದ ಅತ್ಯಂತ ಕಠೋರ ದಿನಗಳು. ದೇಶದ ಇತಿಹಾಸದಲ್ಲಿ ಭೋಪಾಲ್ ಅನಿಲ ದುರಂತ ಕರಾಳ ಅಧ್ಯಯವನ್ನೇ ಸೃಷ್ಟಿಸಿತು. ಅಂದಹಾಗೆ, ಡಿ 3 ರಂದು ಭೂಪಾಲ್ ಅನಿಲ ಸೋರಿಕೆ ದಿನವನ್ನಾಗಿ ಆಚರಿಸಲಾಗುತ್ತಿದೆ
ಎರಡನೇ ಮಹಾಯುದ್ಧದಲ್ಲಿ ಹಿರೋಷಿಮಾದ ಮೇಲೆ ಅಮೆರಿಕ ಎಸೆದ ಅಣುಬಾಂಬ್ ನಿಂದ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದರು. ಅದು ಯುದ್ಧದ ಒಂದು ಭಾಗವಾಗಿತ್ತು. ಆದರೆ, ಭಾರತದ ಭೋಪಾಲ್ ನಲ್ಲಿ ಸಂಭವಿಸಿದ್ದು ಯೂನಿಯನ್ ಕಾರ್ಬೈಡ್ ಕಂಪನಿಯ ಒಂದು ಮಹಾನ್ ನಿರ್ಲಕ್ಷ್ಯಕ್ಕೆ ದ್ಯೋತಕ. ಜಪಾನ್ ಜನತೆಗೆ ಅಮೆರಿಕಾ ದುಸ್ವಪ್ನವಾಗಿ ಕಾಡಿದರೆ, ಭಾರತ ಜನತೆಗೆ ಯೂನಿಯನ್ ಕಾಬ್ರೈಡ್ ಕಂಪನಿ ಹೆಮ್ಮಾರಿಯಾಗಿ ಕಾಡಿತ್ತು. ಈ ಭೋಪಾಲ್ ಅವಘಡಕ್ಕೆ ಡಿಸೆಂಬರ್ 3 ಕ್ಕೆ 25 ವರ್ಷಗಳು ಪೂರ್ಣಗೊಳ್ಳಲಿವೆ. ಘಟನೆ ಸಂಭವಿಸಿದ ನಂತರ ಶಾಶ್ವತವಾಗಿ ಯೂನಿಯನ್ ಕಾರ್ಬೈಡ್ ಕಂಪನಿಯನ್ನು ಮುಚ್ಚಲಾಗಿತ್ತು. ಆದರೆ, ಇದೀಗ ಮತ್ತೆ ಈ ಕಂಪನಿಯ ನೂತನ ತಂತ್ರಜ್ಞಾನಗಳನ್ನು ಅಳವಡಿಸಿ ಭಾರಿ ಸುರಕ್ಷತೆಯೊಂದಿಗೆ ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರ್ಧರಿಸಿವೆ.
ಮುಂದಿನ ತಿಂಗಳನಿಂದ ಯೂನಿಯನ್ ಕಾರ್ಬೈಡ್ ಕಂಪನಿ ಕಾರ್ಯ ಆರಂಭಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜೊತೆಗೆ 1984 ರ ದುರಂತದಲ್ಲಿ ಮಡಿದವರು ಸ್ಮರಣಾರ್ಥವಾಗಿ ಕಂಪನಿಯ ಆವರಣದಲ್ಲಿ ಹಿರೋಷಿಮಾ ಮಾದರಿಯಲ್ಲಿ ಘಟನೆಯ ಎಲ್ಲ ವಿವರವನ್ನು ದಾಖಲಿಸಲಾಗುವುದು. ಇದಕ್ಕಾಗಿ ಕೇಂದ್ರಕ್ಕೆ 116 ಕೋಟಿ ರುಪಾಯಿಗಳ ನೆರವಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಹೇಳಿದರು.
ಕಳೆದ ವಾರ ರಾಜ್ಯ ಹೈಕೋರ್ಟ್ ಯೂನಿಯನ್ ಕಾರ್ಬೈಡ್ ಕಂಪನಿಯ ಕಾರ್ಯಾರಂಭಕ್ಕೆ ಅನುಮತಿ ನೀಡಿದೆ. ಸದ್ಯ ರಾಜ್ಯದಲ್ಲಿ ಉಪಚುನಾವಣೆಗಳು ನಡೆಯುತ್ತಿದ್ದು, ನೀತಿ ಸಂಹಿತೆ ಉಲ್ಲಂಘನೆ ಕಾರಣದಿಂದ ಕಂಪನಿಯ ಕಾರ್ಯಾರಂಭವನ್ನು ಜನವರಿ ತಿಂಗಳಿಗೆ ಮುಂದೂಡಲಾಗಿದೆ. ಕಂಪನಿಯ ಸುತ್ತಮುತ್ತ ಸರಕಾರಿ ಜಾಗವನ್ನು ಅಕ್ರಮಣ ಮಾಡಿರುವುದನ್ನು ಕೂಡಲೇ ತೆರವುಗೊಳಿಸಲಾಗುವುದು ಎಂದು ಚೌಹಾಣ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)