ವಂಚಿತೆ ಪ್ರಿಯಾಂಕಾಳಿಗೆ ಆಚಾರ್ಯರ ಶ್ರೀರಕ್ಷೆ
ಗೃಹ ಸಚಿವ ವಿಎಸ್ ಆಚಾರ್ಯಅವರ ನಿವಾಸಕ್ಕೆ ಪ್ರಿಯಾಂಕಾಸೇರಿದಂತೆ ಅವರ ಕುಟುಂಬದ ಸದಸ್ಯರು ಭೇಟಿ ಮಾಡಿದರು.ವಂಚಿತೆ ಪ್ರಿಯಾಂಕಾರಿಂದ ದೂರು ಸ್ವೀಕರಿಸಿದ ಅಚಾರ್ಯ ಅವರು, ತಕ್ಷಣ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ವಿವರ ಪಡೆದರು. ನಂತರ ತಪ್ಪಿಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದರು ಎನ್ನಲಾಗಿದೆ.
ಇದಕ್ಕೂ ಮುನ್ನ ಇಂದು ಬೆಳಗ್ಗೆ ನಂದಿನಿಲೇಔಟ್ ಪೊಲೀಸ್ ಠಾಣೆಯ ಮುಂದೆ ನೂರಾರು ಜನರು ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸಿದರು. ನಂದಿನಿಲೇಔಟ್ ನ ಸರಸ್ವತಿ ಪುರಂ ನಿವಾಸಿ , ವಂಚನೆಗೊಳಗಾದ ಯುವತಿ ಪ್ರಿಯಾಂಕಾ ಅವರಿಗೆ ಸ್ಥಳೀಯ ಮಹಿಳಾ ಸಂಘಟನೆಗಳು, ಸ್ಥಳೀಯ ನಾಗರೀಕ ಸೇವಾ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದು, ದೂರು ದಾಖಲಿಸಲು ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಉತ್ತರ ವಲಯ ಡಿಸಿಪಿ ರೇವಣ್ಣ ಅವರು, ಪ್ರಿಯಾಂಕಾ ಅವರ ಅಹವಾಲನ್ನು ಆಲಿಸಿದರು. 24 ಗಂಟೆವರೆಗೂ ಕಾಯಲು ತಿಳಿಸಿದ್ದಾರೆ. ಕಾನೂನು ರೀತಿಯಲ್ಲೇ ಹೋರಾಟ ನಡೆಸುತ್ತೇವೆ. ನಂದಿನಿ ಲೇಔಟ್ ನ ಎಲ್ಲಾ ನಾಗರೀಕರ ಬೆಂಬಲ ನನಗೆ ಸಿಕ್ಕಿದೆ .ಘಟನೆ ಬಗ್ಗೆ ಟಿವಿ9, ಸುವರ್ಣ ಚಾನೆಲ್ ನಲ್ಲಿ ರಾಜ್ಯದ ಜನರು ನೋಡಿದ್ದಾರೆ. ಸರಿಯಾದ ಸಮಯಕ್ಕೆ ನ್ಯಾಯ ದೊರಕದಿದ್ದಲ್ಲಿ ರಾಜ್ಯದ ಜನರ ಬೆಂಬಲ ಪಡೆದು ಹೋರಾಟ ಮುಂದುವರೆಸುವುದಾಗಿ ವಂಚಿತೆ ಪ್ರಿಯಾಂಕಾ ಸುದ್ದಿಗಾರರಿಗೆ ತಿಳಿಸಿದರು.ಈ ಮಧ್ಯೆ ಆರೋಪಿ ಆನಂದ್ ಹಾಗೂಆತನ ಮನೆಯವರು ನಾಪತ್ತೆಯಾಗಿದ್ದಾರೆ. ಮದುವೆ ಮಂಟಪ, ಛತ್ರವನ್ನು ಹಾಗೇ ಬಿಟ್ಟು ಪರಾರಿಯಾಗಿದ್ದಾರೆ. ಪ್ರಿಯಾಂಕ ಹಾಗೂ ಆನಂದ್ ಅವರ ಪ್ರೇಮ ಕಥೆ ನಿಜ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)