ಮಿತವ್ಯಯ ವಿರೋಧಿ ಯಡ್ಡಿ ಅಂಡ್ ಗ್ಯಾಂಗ್
ತಮ್ಮ ನಿವಾಸದ ರಿಪೇರಿಗೆ ಸುಣ್ಣ ಬಣ್ಣ ಮಾಡೋದಕ್ಕೆ, ದಿಕ್ಕುಗಳಿಗೆ ದಿಗ್ಬಂಧನ ಹಾಕಿಸಲು ಯಡಿಯೂರಪ್ಪನವರು ಕಮ್ಮಿಯಂದರೂ 1.7 ಕೋಟಿ ರು ವ್ಯಯ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸಿಎಂ ನಿವಾಸದ ಸುಣ್ಣ ಬಣ್ಣ ಕಾರ್ಯಕ್ಕೆ ತಗುಲಿದ ವೆಚ್ಚದ ಆಯವ್ಯಯ ಕೂಡ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಸಿಕ್ಕಿದೆ.
ಒಂದೆಡೆ ಕಾಂಗ್ರೆಸ್ಸಿಗರು ಆರ್ಥಿಕ ಉಳಿತಾಯದ ಶಂಖ ಊದುತ್ತಿದ್ದರೆ, ಅದಕ್ಕೆ ವ್ಯತಿರಿಕ್ತವಾಗಿ ಬಿಜೆಪಿಯ ದಕ್ಷಿಣ ಪಥೇಶ್ವರರು ದುಂದು ವೆಚ್ಚ, ಅನಾವಶ್ಯಕ ಖರ್ಚು ಮಾಡುವುದರಲ್ಲಿ ಎತ್ತಿದ ಕೈ ಎನಿಸಿದ್ದಾರೆ. ದೇವರಾಜ ಅರಸ್ ರಸ್ತೆ(ರೇಸ್ ಕೋರ್ಸ್ ರಸ್ತೆ) ಯಲ್ಲಿರುವಇಡೀ ಬಂಗ್ಲೆ ರಿಪೇರಿ ಕೆಲಸಕ್ಕೆ 1.7 ಕೋಟಿ ರು ತಗುಲಿದರೆ, ಯಡ್ಡಿಯೂರಪ್ಪ ಅವರ ಬೆಡ್ ರೂಂ ಶೃಂಗಾರಕ್ಕೆ ಬರೋಬ್ಬರಿ 35ಲಕ್ಷ ಬೇಕಾಯಿತಂತೆ. ಇನ್ನೊಂದು ಬೆಡ್ ರೂಂಗೆ 14.65 ಲಕ್ಷ ಖರ್ಚಾಗಿದೆ. ಉಳಿದಂತೆ, ಒಳಾಂಗಣ ವಿನ್ಯಾಸ, ಶೌಚಾಲಯ ಸರಿಪಡಿಸಲು 10 ಲಕ್ಷ, ಮಾರ್ಬಲ್ ನೆಲಹಾಸು, ಗೋಡೆಗಳ ಶೃಂಗಾರಕ್ಕೆ ತಲಾ 10 ಲಕ್ಷ ತಗುಲಿದೆಯಂತೆ. ಸಾರ್ವಜನಿಕವಾಗಿ ಬೇಕಾದಕ್ಕೆ ಬೇಡದಕ್ಕೆಲ್ಲಾ ಕಣ್ಣೀರಿಡುವ ಸಿಎಂ, ವಾಸ್ತು ನಂಬಿ ದುಬಾರಿ ವೆಚ್ಚದಲ್ಲಿ ಮನೆ ದುರಸ್ತಿ ಮಾಡುವಲ್ಲಿ ಕೃಷ್ಣರನ್ನು ಮೀರಿಸಿದ್ದಾರೆ ಎನ್ನಲಡ್ಡಿಯಿಲ್ಲ.
ಬಿಜೆಪಿಯ ದುಂದು ವೆಚ್ಚದ ಸಂಕ್ಷಿಪ್ತ ಸಾರಾಂಶ
ಗುಲ್ಬರ್ಗದಲ್ಲಿ ಸಂಪುಟ ಸಭೆ ನಡೆಸಲು ಕರ್ನಾಟಕ ಸರ್ಕಾರ ವ್ಯಯಿಸಿದ್ದು 1ಕೋಟಿ ಯಾದರೆ, ಫ್ಲೋರಿಂಗ್ ಕಾರ್ಯಕ್ಕೆ ಸುಮಾರು 28 ಲಕ್ಷ ಖರ್ಚು ಮಾಡಲಾಗಿತ್ತು. ಈ ಮೊದಲು ರೇಸ್ ಕೋರ್ಸ್ ರಸ್ತೆಯ ಬಂಗ್ಲೆ ಬದಲು ಸ್ಯಾಂಕಿ ರಸ್ತೆಯಲ್ಲಿರುವ ಅಧಿಕೃತ ನಿವಾಸ 'ಅನುಗ್ರಹ' ಕ್ಕೆ ತೆರಳಲು ಸಿಎಂ ಚಿಂತಿಸಿದ್ದರಿಂದ, ಅನುಗ್ರಹಕ್ಕೂ ವಾಸ್ತುವಿನ ಅನುಗ್ರಹ ದೊರೆತು ಸುಮಾರು 19 ಲಕ್ಷ ರು ವೆಚ್ಚದಲ್ಲಿ ಸುಣ್ಣ ಬಣ್ಣ ಬಳಿದುಕೊಂಡು ಶೃಂಗಾರಗೊಂಡಿತ್ತು. ಆದರೆ, ಸಿಎಂ ಬದಲು ಅವರ ಆಪ್ತರಲ್ಲಿ ಒಬ್ಬರಾದ ಗೃಹ ಸಚಿವ ವಿಎಸ್ ಆಚಾರ್ಯ ಅವರಿಗೆ ಅನುಗ್ರಹದಲ್ಲಿ ಹಾಲು ಉಕ್ಕಿಸುವ ಯೋಗ ಒದಗಿಬಂದಿತು.
ಇದು ಇಲ್ಲಿಗೆ ಮುಗಿಯುವುದಿಲ್ಲ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಿತ್ತಾಗು ಮೆತ್ತಾಕು(ಅದೂ ಆಡಳಿತದಲ್ಲೂ ಪ್ರತಿಬಿಂಬಿತವಾಗಿದೆ ಎಂಬುದು ಕಾಕತಾಳೀಯ)ಎಂಬಂತೆ ಸಿಎಂ ಅವರು 10 ಕೋಟಿ, ಕರುಣಾಕರ ರೆಡ್ಡಿ ಅವರು ಅಧಿಕೃತ ನಿವಾಸದ ಅಲ್ಪಸ್ವಲ್ಪ ರಿಪೇರಿ ಕೆಲಸಕ್ಕೆ 15.28ಲಕ್ಷ ರು, ಡಿ ಸುಧಾಕರ್ಅವರು ಅಡುಗೆ ಅರಮನೆ ನಾವೀನ್ಯತೆಗೆ 4.41 ಲಕ್ಷ ವ್ಯಯಿಸಿದ್ದಾರೆ.
ಕುಮಾರಕೃಪ ರಸ್ತೆಯ ಕಾವೇರಿ ಗೃಹ ನಿವಾಸಿ ಸಭಾಪತಿ ಜಗದೀಶ್ ಶೆಟ್ಟರ್ ಕೂಡ ಕಮ್ಮಿಯಿಲ್ಲ, ಪೀಠೋಪಕರಣ, ದುರಸ್ತಿ ಕಾರ್ಯಕ್ಕೆ 4.70 ಲಕ್ಷ ರು ಸುರಿದಿದ್ದಾರೆ.ಅಚ್ಚರಿಯೆಂಬಂತೆ ಸುರಸುಂದರಾಂಗ ಎಂದು ಭಾವಿಸಿರುವ ಶ್ರೀರಾಮುಲು ಅವರು ಅತಿ ಕಡಿಮೆ ವ್ಯಯ ಮಾಡಿರುವ ಮಂತ್ರಿಯಾಗಿದ್ದಾರೆ. ಅವರು ಹಾಗೂ ಕೆಎಸ್ ಈಶ್ವರಪ್ಪ ಅವರ ಖರ್ಚು ವೆಚ್ಚ 6ಲಕ್ಷ ಮೀರಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಒಟ್ಟಾರೆ ಸಾರಾಂಶದಂತೆ ಸಿಎಂ 10ಕೋಟಿ, ಕರುಣಾಕರ ರೆಡ್ಡಿ 88.26 ಲಕ್ಷ, ವಿಎಸ್ ಆಚಾರ್ಯ 61.30 ಲಕ್ಷ, ಜಗದೀಶ್ ಶೆಟ್ಟರ್ 24.83ಲಕ್ಷ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ 38.05 ಲಕ್ಷ ಪೋಲು ಮಾಡಿದ್ದಾರೆ.ಕ್ಷಮಿಸಿ, ಮನೆ ಶೃಂಗಾರಕ್ಕೆ ಬಳಸಿದ್ದಾರೆ.
ಕನ್ನಡಹಬ್ಬದ ಈ ತಿಂಗಳಿನಲ್ಲಿ ಈ ಸಮಯಕ್ಕೆ ಈ ಕೆಳಗಿನ ಸಾಲುಗಳನ್ನು ಹಾಡಲು ಯಾರಪ್ಪಣೆಯೂ ಬೇಡ.
ಬಾರಿಸು
ಕನ್ನಡ
ಡಿಂಡಿಮವ
ಓ...
ಕರ್ನಾಟಕ
ಹೃದಯಶಿವ
ಹೊಟ್ಟೆಕಿಚ್ಚಿಗೆ
ಕಣ್ಣೀರು
ಸುರಿಸು,
ಒಟ್ಟಿಗೆ
ಬಾಳುವ
ತೆರದಲಿ
ಹರಸು...