ರಣರಂಗವಾದ ಮಹಾರಾಷ್ಟ್ರ ವಿಧಾನಸಭೆ
ಕಳೆದ 20 ದಿನಗಳ ನಂತರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕೂ ಮುಂಚೆ ಶಾಸಕರ ಮತ್ತು ಸಚಿವರು ಮರಾಠಿ ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮನವಿ ಮಾಡಿಕೊಂಡಿದ್ದರು. ಆದರೆ, ರಾಷ್ಟ್ರ ಭಾಷೆ ಹಿಂದಿಯಲ್ಲಿ ಸಮಾಜವಾದಿ ಶಾಸಕರ ಅಬು ಅಜ್ಮಿ ಮುಂದಾದಾಗ ಎಂಎನ್ಎಸ್ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ದಿಕ್ಕಾರದ ಘೋಷಣೆ ಕೂಗುತ್ತಾ, ಪ್ರಮಾಣ ವಚನ ಸ್ವೀಕರಿಸಲು ಇಡಲಾಗಿದ್ದ ಮೈಕನ್ನು ಕಿತ್ತು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಂಎನ್ಎಸ್ ಶಾಸಕರು ಮತ್ತು ಅಬು ಅಜ್ಮಿ ನಡುವೆ ಮಾತಿನ ಚಕಮಕಿ ನಡೆಯಿತು.
ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾದಾಗ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಮನವಿ ಮೇರೆಗೆ ಸದನವನ್ನು ಅರ್ಧ ಗಂಟೆ ಕಾಲ ಮುಂದೂಡಲಾಯಿತು. ಒಂದು ದಿನದ ಮಟ್ಟಿಗೆ ಎಂಎನ್ಎಸ್ ಶಾಸಕರನ್ನು ಅಮಾನತು ಮಾಡುವಂತೆ ಸಿಎಂ ಸ್ಪೀಕರ್ ಗೆ ಮನವಿ ಮಾಡಿದ್ದಾರೆ. ಪ್ರತಿಕ್ರಿಯೆ ನೀಡಿರುವ ಅಬು ಅಜ್ಮಿ, ಹಿಂದಿ ರಾಷ್ಟ್ರ ಭಾಷೆ. ಹೀಗಾಗಿ ಅದೇ ಭಾಷೆಯಲ್ಲಿ ಪ್ರಮಾಣ ಸ್ವೀಕರಿಸುವೆ. ಮರಾಠಿ ಸ್ವೀಕರಿಸಿ ಎಂದು ಹೇಳಲು ರಾಜ್ ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ಘಟನೆಯನ್ನು ಸಮಾಜವಾದಿ ಪಕ್ಷ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ತೀವ್ರವಾಗಿ ಖಂಡಿಸಿದ್ದಾರೆ.
(ಏಜನ್ಸೀಸ್)