ರಾಜೀಸೂತ್ರಕ್ಕೆ ಯಡ್ಡಿ ರೆಡಿ, ರೆಡ್ಡಿ ಅಡ್ಡಿ

* ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೊಕ್ ನೀಡುವುದು.
* ಸ್ಪೀಕರ್ ಜಗದೀಶ್ ಶೆಟ್ಟರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು.
* ಬಳ್ಳಾರಿಯಿಂದ ವರ್ಗಾವಣೆಗೊಂಡ ಎಲ್ಲ ಅಧಿಕಾರಿಗಳು ಮತ್ತೆ ಬಳ್ಳಾರಿಗೆ ವರ್ಗ.
* ಸರಕಾರ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುಂಚೆ ಚರ್ಚೆ ನಡೆಸಲು ಕೋರ್ ಕಮೀಟಿ ರಚನೆ.
* ವಿ ಪಿ ಬಳಿಗಾರ ಅವರ ವರ್ಗಾವಣೆ.
* ತಿಂಗಳ ನಂತರ ಸಂಪುಟ ಪುನಾರಚನೆ ಮಾಡುವುದು.
ಎಲ್ ಕೆ ಅಡ್ವಾಣಿ ನಿವಾಸದಲ್ಲಿ ನಡೆದ ಕೋರ್ ಕಮೀಟಿಯಲ್ಲಿ ಕರ್ನಾಟಕದ ಬಿಕ್ಕಟ್ಟಿನ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಅಡ್ವಾಣಿ, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಅನಂತಕುಮಾರ್, ಅಬ್ಬಾಸ್ ಅಲಿ ನಕ್ವಿ ಸೇರಿದಂತೆ ಪಕ್ಷ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಭಾಗವಹಿಸಿ ಮಾತುಕತೆ ನಡೆಸಿದರು.
ಬಂಡಾಯ ನಾಯಕ ಜನಾರ್ದನ ರೆಡ್ಡಿ ಮಾತ್ರ ನಾಯಕತ್ವ ಬದಲಾವಣೆ ಪಟ್ಟನ್ನು ಮಾತ್ರ ಬಿಡುತ್ತಿಲ್ಲ. ಯಡಿಯೂರಪ್ಪ ಅವರನ್ನು ರಾಜ್ಯಕ್ಕೆ ತೆರಳುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಅನೇಕ ಸುತ್ತಿನ ಚರ್ಚೆಯ ನಂತರ ಹೈಕಮಾಂಡ್ ಅಂತಿಮವಾಗಿ ರಾಜೀಸೂತ್ರಕ್ಕೆ ಬಂದಿದೆ. ಪಕ್ಷದ ಶಿಸ್ತು ಪಾಲಿಸಿ ಇಲ್ಲವೇ ಚುನಾವಣೆ ಎದುರಿಸಿ ಎಂದು ಹೈಕಮಾಂಡ್ ಭಿನ್ನಮತೀಯರಿಗೆ ಅಂತಿಮ ಎಚ್ಚರಿಕೆ ನೀಡಿದೆ.
ಐದನೇ ಬಾರಿಗೆ ಜನಾರ್ದನ ರೆಡ್ಡಿ ಅವರು ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತುಕತೆ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಕೆಳಗಿಳಿಸಿಯೇ ವಿರಮಿಸುವ ಮಾತುಗಳನ್ನು ಆಡಿದರು. ಮನೆ ಯಜಮಾನನ ಮನಸ್ಥಿತಿ ಸರಿಯಿಲ್ಲ. ಅವರೊಂದಿಗೆ ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಹೈದರಾಬಾದ್ ಗೆ ರೆಡ್ಡಿ ಪ್ರಯಾಣ
ಮಾತುಕತೆ ಮುರಿದುಬಿದ್ದ ನಂತರ ತಮ್ಮ ಆಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸಲು ಜನಾರ್ದನ ರೆಡ್ಡಿ ಸಂಜೆ ಹೈದರಾಬಾದ್ ಗೆ ತೆರಳಿದರು. ಹೈದರಾಬಾದ್ ನ ನೋವೋಟಲ್ ಹೋಟೆಲ್ ನಲ್ಲಿ ತಂಗಿರುವ ತಮ್ಮ ಬೆಂಬಲಿಗ ಶಾಸಕರೊಂದಿಗೆ ಮಾತುಕತೆ ನಡೆಸಿ ಮುಂದಿನ ಕಾರ್ಯ ತಂತ್ರಗಳ ಬಗ್ಗೆ ಯೋಜನೆ ರೂಪಿಸುವ ಸಾಧ್ಯತೆ ಇದೆ. ಇದರ ರೇಣುಕಾಚಾರ್ಯ ಮತ್ತವರ ಗ್ಯಾಂಗ್ ರಾಜೀನಾಮೆ ನಾಟಕ ಶುರು ಮಾಡಿಕೊಂಡಿದ್ದು, 51 ಮಂದಿ ಶಾಸಕರು ಈಗಾಗಲೇ ರಾಜೀನಾಮೆ ಪತ್ರ ನೀಡಿದ್ದಾರೆ. ಇದರ ಬಗ್ಗೆ ಜನಾರ್ದನರೆಡ್ಡಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಮಂತ್ರಿ ಪದವಿ ಕಳೆದುಕೊಂಡಿರುವ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಅವರು, ಯಡಿಯೂರಪ್ಪ, ಜನಾರ್ದನರೆಡ್ಡಿ ಒಂದಾದರೂ ಸರಿ. ನಾನು ಮಾತ್ರ, ತೆಗೆದುಕೊಂಡ ತೀರ್ಮಾನದ ಬಗ್ಗೆ ಹಿಂದೆ ಸರಿಯುವ ಮಾತೇ ಇಲ್ಲ. ರಾಜ್ಯ ನಾಯಕತ್ವ ಬದಲಾಗಬೇಕು ಎನ್ನುವುದು ನನ್ನ ನಿಲುವು ಎಂದು ಫಲಾನುಭವಿ ಬೆಳ್ಳುಬ್ಬಿಯ ನೋವಿನ ನುಡಿಗಳು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications