ಆರ್ಎಸ್ಎಸ್ಗೆ ದೇಣಿಗೆ : ಸುರೇಶ್ ಸಮರ್ಥನೆ
ಬೆಂಗಳೂರು,ಅ. 20: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬದ್ಧತೆ ಮತ್ತು ಪಾರದರ್ಶಕತೆ ಬಗ್ಗೆ ನಂಬಿಕೆ ಇಟ್ಟು ಜನ ಸಂಘಟನೆಗೆ ದೇಣಿಗೆ ನೀಡುತ್ತಿದ್ದಾರೆಯೇ ಹೊರತು ಅದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ನೆರೆ ಪರಿಸ್ಥಿತಿ ಎದುರಾದಾಗ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಆರೆಸ್ಸೆಸ್ ನೋಡಿ ವಿಪಕ್ಷಗಳು ಕಲಿಯಲಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ಕುಮಾರ್ ಹೇಳಿದ್ದಾರೆ.
ಸೋಮವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ವಿವಿಧ ಭಾಗದಲ್ಲಿ ವಿವಿಧ ಸಂದರ್ಭ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಮತ್ತು 1920 ರ ದಶಕದಲ್ಲಿ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಎದುರಾದಾಗ ಆರ್ಎಸ್ ಎಸ್ ಹೇಗೆ ಕೆಲಸಮಾಡಿದೆ ಎನ್ನುವುದು ಈ ದೇಶದ ಮತ್ತು ರಾಜ್ಯದ ಜನರಿಗೆ ಗೊತ್ತು. ಹಲವು ಸಂದರ್ಭದಲ್ಲಿ ಸರ್ಕಾರದ ಪರಿಹಾರ ಕಾರ್ಯಆರಂಭಗೊಳ್ಳುವ ಮುನ್ನವೇ ಸಂತ್ರಸ್ತರ ನೆರವಿಗೆ ಧಾವಿಸಿರುವ ಇತಿಹಾಸ ಸಂಘಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ತಾವೂ ಸಹ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ಮತ್ತು ಕೆಲವು ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಸಂಘ ತಿಳಿಸಿದಾಗ ಸರ್ಕಾರ ಹೇಗೆ ತಾನೇ ಬೇಡ ಎನ್ನಲು ಸಾಧ್ಯ.
ಇತರ ಸಂಘಟನೆಗಳಿಗೆ ಸಹ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿವೆ. ಯಾರಿಗೂ ಸರ್ಕಾರ ಬೇಡ ಎಂದಿಲ್ಲ ಎಂದು ಸುರೇಶ್ಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಿಧಿ ದುರುಪಯೋಗವಿಲ್ಲ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜನ ನೇರವಾಗಿ ನೆರವು ನೀಡಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಅದನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಹಾಗಾಗಿ ಪರಿಹಾರ ನಿಧಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎನ್ನುವುದರಲ್ಲಿ ಹುರುಳಿಲ್ಲ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ವಿರೋಧ ಪಕ್ಷದ ಹಲವು ನಾಯಕರು ಆರೆಸ್ಸೆಸ್ ನ ದೇಣಿಗೆ ಸಂಗ್ರಹ ಹಾಗೂ ಪರಿಹಾರ ಕಾರ್ಯಾಚರಣೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಇದಕ್ಕೆ ಶಾಸಕ ಸಿಟಿ ರವಿ ಕೂಡ ಖಾರವಾಗೇ ಉತ್ತರಿಸಿದ್ದರು.
(ಏಜೆನ್ಸ್ಸೀಸ್)