ಅತಿವೃಷ್ಟಿ: ಬೆಳಗಾವಿಯಲ್ಲಿ ಸಾರ್ವಜನಿಕ ರಜೆ ರದ್ದು
ಇತ್ತೀಚಿಗೆ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಅದ ಅತಿವೃಷ್ಟಿಯಿಂದ ಸಾರ್ವಜನಿಕರು ತತ್ತರಿಸಿದ್ದಾರೆ. ಈ ಸಂಬಂಧ ಸಾವಿರಾರು ಕೋಟಿ ರೂಪಾಯಿಗಳ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಹಾನಿ ತಟ್ಟಿದೆ. ಇದರ ಹಿನ್ನಲೆಯಲ್ಲಿ ಹೆಚ್ಚಿನ ಅನುದಾನಕ್ಕಾಗಿ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಮನವಿ ಸಿದ್ಧಪಡಿಸಬೇಕಾಗಿದೆ.
ಇದು ಅಲ್ಲದೇ ರಾಜ್ಯದಲ್ಲಿ ಉಂಟಾಗಿರುವ ನಷ್ಟದ ಅಧ್ಯಯನಕ್ಕಾಗಿ ಕೇಂದ್ರದ ಅಧ್ಯಯನ ತಂಡವು ರಾಜ್ಯಕ್ಕೆ ಭೇಟಿ ನೀಡುತ್ತಿದೆ. ಆದ್ದರಿಂದ ತಾಲೂಕು ಮತ್ತು ಜಿಲ್ಲಾ ಮಟ್ಟದ ಕಚೇರಿಗಳಿಂದ ಸರಕಾರಕ್ಕೆ ವಿವಿಧ ಮಾಹಿತಿಗಳನ್ನು ಸಲ್ಲಿಸಬೇಕಾಗಿದೆ. ಸರಕಾರದ ಮಟ್ಟದಿಂದ ಈ ಬಗ್ಗೆ ಯಾವುದೇ ಕ್ಷಣದಲ್ಲಿ ವಿವಿಧ ಮಾಹಿತಿಗಳನ್ನು ಪಡೆಯಬೇಕಾಗಿದೆ.
ಈ ಕಾರಣಕ್ಕಾಗಿ ಎರಡನೇಯ ಶನಿವಾರ ಹಾಗೂ ರವಿವಾರದಂದು ಈ ಎರಡೂ ರಜೆ ದಿನಗಳಂದು ಎಂದಿನಂತೆ ಕಾರ್ಯನಿರ್ವಹಿಸಲು ಸರಕಾರವು ನಿರ್ದೇಶಿಸಿದ್ದು, ಆದ್ದರಿಂದ ಜಿಲ್ಲಾ ಮಟ್ಟದ, ಉಪವಿಭಾಗ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಎಂದಿನಂತೆ ದೈನಂದಿನ ಕಾರ್ಯನಿರ್ವಹಿಸಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)