ಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ
ಕಳೆದ ನೂರು ವರ್ಷಗಳಲ್ಲಿ ಈ ಪರಿ ಪ್ರಕೃತಿ ಮುನಿದಿರಲಿಲ್ಲ. ಒಂದು ವಾರದಿಂದ ಸುರಿದ ಮಳೆಯಿಂದಾಗಿ ಜನರ ಜೀವನ ಹರಣವಾಗಿದೆ, ಜಾನುವಾರು, ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಇದರಿಂದಾಗಿ 18 ಜಿಲ್ಲೆಗಳಲ್ಲಿ 18 ಮಿಲಿಯನ್ ಜನ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.
200ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. 25 ಲಕ್ಷ ಹೆಕ್ಟೇರ್ ಸಾಗುವಳಿ ಜಮೀನು ಸಂಪೂರ್ಣ ಸರ್ವನಾಶವಾಗಿದೆ. ರಸ್ತೆ ಮತ್ತು ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. 17 ಸಾವಿರ ಕೋಟಿ ರು.ಗಳಷ್ಟು ಆಸ್ತಿಪಾಸ್ತಿಗೆ ಹಾನಿಯುಂಟಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರ ಪ್ರವಾಹ ಪೀಡಿತ ಪ್ರದೇಶದಿಂದ ಜನರನ್ನು ರಕ್ಷಿಸಲು ಎಲ್ಲ ಪ್ರಯತ್ನ ನಡೆಸಿದೆ. ಆದರೆ, ಪುನರ್ ವಸತಿ, ಪುನರ್ ನಿರ್ಮಾಣದ ಕಾಮಗಾರಿ ಕೆಲ ಸಮಯ ತೆಗೆದುಕೊಳ್ಳುತ್ತದೆ. ಮನೆಮಠ ಕಳೆದುಕೊಂಡವರಿಗೆ ವಸತಿ, ಮೂಲಸೌಕರ್ಯ ಕಲ್ಪಿಸಬೇಕು. ಇದಕ್ಕಾಗಿ ಕೇಂದ್ರದ ಸಹಾಯವನ್ನೂ ಪಡೆದಿದೆ. ಆದರೂ, ರಾಜ್ಯಕ್ಕೆ ಸಾಕಷ್ಟು ಹಣ, ಇತರ ವಸ್ತುಗಳ ಅಗತ್ಯವಿರುವುದರಿಂದ ಮುಕ್ತಹಸ್ತದಿಂದ ಸಹಾಯ ನೀಡಬೇಕೆಂದು ಯಡಿಯೂರಪ್ಪನವರು ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಇಂದು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಸಿದ ಪಾದಯಾತ್ರೆಯಲ್ಲಿ ನಗರದ ನಾಗರಿಕರು ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ, ತಿಳಿದಷ್ಟು ಹಣ, ಬಟ್ಟೆ, ಆಹಾರ ಪದಾರ್ಥಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳು ತಿಳಿಸಿದಂತೆ 500 ಕೋಟಿ ರು.ಯಷ್ಟು ಹಣ ಸಂಗ್ರಹವಾಗಿದೆ. ಪರಿಹಾರ ನಿಧಿಗಾಗಿ ಹಣ ಸಂಗ್ರಹ ಅಭಿಯಾನವನ್ನು ರಾಜ್ಯದ ಇತರ ನಗರಗಳಲ್ಲಿಯೂ ವಿಸ್ತರಿಸಬೇಕೆಂದು ಆಗ್ರಹ ಕೇಳಿಬಂದಿದೆ. ಕೆಲಸ ಇರಲಿ, ಇಲ್ಲದಿರಲಿ, ಮಕ್ಕಳಿರಲಿ, ಮುದುಕರಿರಲಿ ಉತ್ತರ ಕರ್ನಾಟಕದ ಜನರಿಗೆಗಾಗಿ ದೇಣಿಗೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)