ಮಂತ್ರಾಲಯ ಪ್ರವಾಹ, ಮಂಚಾಲಮ್ಮನ ಶಾಪ !!
ಒಂದು ವರ್ಷದ ಹಿಂದೆ ಜೀರ್ಣೋದ್ಧಾರದ ಹೆಸರಿನಲ್ಲಿ ಮಂಚಾಲಮ್ಮನ ದೇವಾಲಯದ ಗೋಪುರವನ್ನು ಕೆಡವಲಾಯಿತು. ಅಲ್ಲಿಂದ ದೇವಿಗೆ ಪೂಜೆಯೂ ನಿಂತಿತು. ಜೀರ್ಣೋದ್ಧಾರದ ಕೆಲಸವನ್ನು ಬೇಗ ಮುಗಿಸಿ ಪೂಜೆ ಆರಂಭಿಸಿ ಇಲ್ಲವಾದರೆ ದೇವಿ ಮುನಿಸಿಕೊಳ್ಳುತ್ತಾಳೆ ಎಂದು ಮಠದ ಮುಖ್ಯಸ್ಥರಿಗೆ ಹೇಳುತ್ತಲೇ ಬಂದರೂ ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಅನಾಹುತಕ್ಕೆ ಇದೇ ಕಾರಣ ಎಂದು ಗ್ರಾಮಸ್ಥರು ಶ್ರೀ ಮಠವನ್ನು ದೂರುತ್ತಿದ್ದಾರೆ.
ಮಂಚಾಲಮ್ಮ ಬೇರೆ ಅಲ್ಲ, ರಾಯರು ಬೇರೆ ಅಲ್ಲ. ಆ ತಾಯಿ ನಮ್ಮ ಗುರುಗಳಿಗೆ ಆಶ್ರಯ ನೀಡಿದವಳು. ಅವಳ ಬಗ್ಗೆ ಖಂಡಿತಾ ಅಸಡ್ಡೆ ಇಲ್ಲ. ಇಷ್ಟು ವರ್ಷ ತುಂಗೆ ಎಷ್ಟೇ ಉಕ್ಕಿ ಹರಿದರೂ ನೀರು ಮಂಚಾಲಮ್ಮನ ಗುಡಿ ಮುಟ್ಟುತ್ತಿತ್ತೇ ವಿನಾ ಬೃಂದಾವನ ಮುಳುಗಿದ್ದನ್ನು ನಾವು ಕೇಳಿಯೂ ಇಲ್ಲ. ನಮ್ಮಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ. ತಾಯಿ ನಮ್ಮನ್ನು ಕ್ಷಮಿಸಲಿ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಯತೀ೦ದ್ರ ತೀರ್ಥರು ಹೇಳಿದ್ದಾರೆ.
ರಾಯರ ಬೃಂದಾವನದ ಕೊಗಳತೆ ದೂರದಲ್ಲಿರುವ ಮಂಚಾಲಮ್ಮ ಮಂತ್ರಾಲಯದ ಗ್ರಾಮದೇವತೆ. ರಾಯರು ಕೂಡ ಮಂಚಾಲಮ್ಮನ ಅನುಮತಿ ಮತ್ತು ಆಶೀರ್ವಾದ ಪಡೆದ ನಂತರವೇ ತುಂಗಭದ್ರಾ ತೀರದಲ್ಲಿ ನೆಲೆಗೊಂಡಿದ್ದು ಎನ್ನುವುದು ಉಲ್ಲೇಖನೀಯ. ರಾಯರ ಬೃಂದಾವನ ಎಷ್ಟೇ ಖ್ಯಾತವಾಗಿದ್ದರೂ ಇಲ್ಲಿನ ಅಂದಾಜು ಸುಮಾರು ಮೂರು ಸಾವಿರ ಮಂದಿ ಆದ್ಯತೆ ನೀಡುವುದು ಮಂಚಾಲಮ್ಮನಿಗೆ ಮಾತ್ರ.
(ದಟ್ಸ್ ಕನ್ನಡ ವಾರ್ತೆ)