ನೈಸ್ ವಿವಾದ : ಸಿಎಂ, ಖೇಣಿಗೆ ನೋಟಿಸ್
ಬೆಂಗಳೂರು, ಸೆ. 1 : ನೈಸ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಬನ್ನೇರುಘಟ್ಟ ರಸ್ತೆ, ಗೊಟ್ಟಗೆರೆ ಬಳಿ ನೈಸ್ ರಸ್ತೆ ನಿರ್ಮಾಣ ಸಂಬಂಧ ನ್ಯಾಯಾಲಯ ನೀಡಿರುವ ತೀರ್ಪನ್ನು ಉಲ್ಲಂಘಿಸಿರುವ ಆರೋಪ ಮಾಡಿರುವ ವಿಜಯರಾಘವನ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮೂವರಿಗೂ ನೋಟಿಸ್ ಜಾರಿ ಮಾಡಿದೆ.
ಗೊಟ್ಟಿಗೆರೆ ಬಳಿ ಕೆರೆ ಪಕ್ಕದಲ್ಲಿ ನೈಸ್ ರಸ್ತೆ ನಿರ್ಮಿಸಲು ವಿಜಯರಾಘವನ್ ಅವರಿಗೆ ಸೇರಿದ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡಿದೆ. ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯರಾಘವನ್ ಆರೋಪಿಸಿದ್ದರು. ಈ ಸಂಬಂಧ ದಾಖಲಿಸಲಾಗಿದ್ದ ಸಿವಿಲ್ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಡಿ ದಿನಕರನ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ, ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಸುಧಾಕರ್ ಗೆ ವಾರದ ಗಡುವು
ಬ್ಯಾಂಕಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಅವರು ರಾಜೀನಾಮೆ ನೀಡಲು ಒಂದು ವಾರ ಗಡುವು ಕೇಳಿದ್ದಾರೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೋಮವಾರ ರಾತ್ರಿ ಸಚಿವ ಸುಧಾಕರ್ ತಮ್ಮನ್ನು ಭೇಟಿ ಮಾಡಿದ್ದರು. ಕಾನೂನಿನ ವಿಷಯಗಳು ಸಮರ್ಪಕವಾಗಿದ್ದು, ಅವರ ಇಚ್ಛೆಯಂತೆ ಒಂದು ವಾರ ನಂತರವೇ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ ಎಂದರು.
ಚೀನಾ ಪ್ರವಾಸ ಮುಗಿಸಿಕೊಂಡ ಬಂದ ನಂತರ ಸುಧಾಕರ್ ಅವರ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ. ಇತ್ತ ವಂಚನೆಗೆ ಸಂಬಂಧಿಸಿದಂತೆ ತಾವು ಅಮಾಯಕ ಎಂಬ ಸಂಗತಿಯನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ಸಚಿವ ಸ್ಥಾನ ಉಳಿಸಿಕೊಳ್ಳಲು ಸುಧಾಕರ್ ಭಾರಿ ಹರಸಾಹಸ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications