ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ
ಬೆಂಗಳೂರು, ಆ, 29 : ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿದ್ದ ಇಬ್ಬರು ಯುವಕರ ಮೇಲೆ ನಾಲ್ವರು ದುಷ್ಕರ್ಮಿಗಳ ತಂಡವೊಂದು ನಡೆಸಿದ ದಾಳಿಯಲ್ಲಿ ಯುವಕನೊಬ್ಬ ಮೃತಪಟ್ಟು, ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ನಗರದ ಪೂರ್ವ ವಿಭಾಗದ ಕೆಲ ಭಾಗಗಳಲ್ಲಿ ಆಗಸ್ಟ್ 30ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಂಪಿಗೆಹಳ್ಳಿಯ ಕ್ರಿಸ್ಟೋಫರ್ (22) ಅಲಿಯಾಸ್ ವಿನೀತ್ ಎಂಬಾತ ಮೃತಪಟ್ಟಿದ್ದರೆ, ಆತನ ಸ್ನೇಹಿತ ನಾಗಾವರದ ವಿಕ್ರಮ್ (22) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಾಗಾವರ, ಬಾಣಸವಾಡಿ, ಹೆಣ್ಣೂರು, ಡಿ ಜಿ ಹಳ್ಳಿ, ಕೆ ಜಿ ಹಳ್ಳಿ ಮತ್ತಿತರ ಕಡೆಗಳಲ್ಲಿ ಕೂರಿಸಿದ್ದ ಗಣೇಶಮೂರ್ತಿಗಳನ್ನು ವಿಸರ್ಜನೆ ಕಾರ್ಯಕ್ರಮಗಳಲ್ಲಿ ನೂರಾರು ಗಣೇಶ ವಿಗ್ರಹಗಳನ್ನು ವಾಹನಗಳಲ್ಲಿ ಮೆರವಣಿಗೆ ಮೂಲಕ ಹಲಸೂರು ಕೆರೆಗೆ ಗುರುವಾರ ತೆರಲಾಗುತ್ತಿತ್ತು. ಕೆಜಿಹಳ್ಳಿ ಠಾಣೆ ವ್ಯಾಪ್ತಿಯ ಟ್ಯಾನರಿ ರಸ್ತೆ ಪೆರಿಯಾರ್ ವೃತ್ತಕ್ಕೆ ಸಂಜೆ 6.30ರ ಸಮಾರಿಗೆ ಮೆರವಣಿಗೆ ಬರುತ್ತಿದ್ದಂತೆಯೇ ಘೋಷಣೆಗಳು ಹೆಚ್ಚಾದವು. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಕಲ್ಲು ತೂರಾಟ ನಡೆಯಿತು. ಇದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಎರಡು ಗುಂಪುಗಳ ನಡುವೆ ಮತ್ತಷ್ಟು ಘರ್ಷಣೆಗಳು ಆಗಬಹುದೆಂದು ಅರಿತ ಪೊಲೀಸರು ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು. ಆದರೆ, ಟ್ಯಾನರಿ ರಸ್ತೆಯಲ್ಲಿ ಶುಕ್ರವಾರವೂ ಉದ್ವಗ್ನ ಸ್ಥಿತಿ ನಿರ್ಮಾಣವಾಗಿರುವುದನ್ನು ತಿಳಿದು ಕೆಜಿಹಳ್ಳಿ, ಬಾಣಸವಾಡಿ, ಹೆಣ್ಣೂರು, ಫ್ರೇಜರ್ ಟೌನ್, ಅಮೃತಹಳ್ಳಿ ಹಾಗೂ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 27 ರಿಂದ 30ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)