ವಿಪ್ರೋ ಜಿಎಂ ಅಪಘಾತದಲ್ಲಿ ಸಾವು
ಬೆಂಗಳೂರು, ಆ. 29 : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಸಿಟಿ ಟ್ಯಾಕ್ಸಿ ಲಾರಿಗೆ ಡಿಕ್ಕಿ ಹೊಡೆದು ವಿಪ್ರೋ ಕಂಪನಿಯ ಜನರಲ್ ಮ್ಯಾನೇಜರ್ ಮೃತಪಟ್ಟು ಕಾರು ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗಿನಜಾವ ನಡೆದಿದೆ.
ಜೆಪಿ ನಗರದ ನಿವಾಸಿ ಸುರೇಶವೀರ್ ರಾಘವ್ (40) ಮೃತಪಟ್ಟವರು. ಚಾಲಕ ದಯಾನಂದ್ ಎಂಬುವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನೈ ಮೂಲದ ಸುರೇಶ್ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದರು. ನಗರದ ವಿಪ್ರೋ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಅವರು, ಕೆಲಸದ ನಿಮಿತ್ತ ಹೈದರಾಬಾದ್ ಗೆ ತೆರಳಲು ಟ್ಯಾಕ್ಸಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು.
ಲಾರಿಯನ್ನು ಹಿಂದಿಕ್ಕುವಾಗ ಬಳ್ಳಾರಿ ರಸ್ತೆ ಐಎಎಫ್ ಬಳಿ ಶುಕ್ರವಾರ ಬೆಳಗಿನ ಜಾವ ಕಾರು ಲಾರಿಗೆ ಅಪ್ಪಳಿಸಿತು. ಸುರೇಶ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು. ಎಂಎಸ್ ರಾಮಯ್ಯ ಅಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)