ಅಭ್ಯರ್ಥಿ ಗೆಲ್ಲಿಸದಿದ್ದರೆ ತೊಟ್ಟ ವಿಷಕೊಡಿ : ಎಚ್ಡಿಕೆ
ರಾಮನಗರದಲ್ಲಿ ಪಕ್ಷದ ಅಭ್ಯರ್ಥಿ ಕೆ ರಾಜು ಅವರನ್ನು ಸೋಲಿಸುವುದಾದರೆ ನನಗೆ ಮೊದಲು ತೊಟ್ಟು ವಿಷ ಕೊಟ್ಟಬಿಡಿ. ರಾಮನಗರದಲ್ಲಿ ಜೆಡಿಎಸ್ ಪಕ್ಷದ ಸೋಲು ನನ್ನ ಹಾಗೂ ಪಕ್ಷದ ಅಸ್ತಿತ್ವದ ಪ್ರಶ್ನೆ. ಜೆಡಿಎಸ್ ಕಾರ್ಯಕರ್ತರಾಗಿರುವ ನೀವೇ ಪಕ್ಷದ ಅಭ್ಯರ್ಥಿಯ ಬಗ್ಗೆ ಅಪಪ್ರಚಾರ ಮಾಡಿಕೊಂಡು ತಿರುಗಾಡಿದರೆ ಹೇಗೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಅವರ ಕಣ್ಣಿಂದ ವರ್ಷಧಾರೆ ದುಮ್ಮಿಕ್ಕತೊಡಗಿದವು.
ಆಗ ಪಕ್ಷದ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಸಮಾಧಾನಪಡಿಸಲು ಮುಂದಾದರೂ, ಮತ್ತೆ ಕೆಲವರು ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದರು. ರಾಮನಗರದ ನಿಮಗಷ್ಟೆ ಅಲ್ಲ, ನಮಗೂ ದೊಡ್ಡ ಪ್ರಶ್ನೆಯಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸುವುದು ನಮ್ಮ ಏಕೈಕ ಗುರಿ. ಯಾವ ಕಾರಣಕ್ಕೂ ನೀವು ಭಯಬೀತರಾಗಬೇಡಿ ಎಂದು ನೆರದಿದ್ದ ಕಾರ್ಯಕರ್ತರ ಸಮೂಹ ಕುಮಾರಸ್ವಾಮಿ ಅವರಿಗೆ ಮಾತು ನೀಡಿತು. ಆದರೂ ಕೂಡಾ ಕುಮಾರಸ್ವಾಮಿ ಅವರ ಕಣ್ಣೀರು ಮಾತ್ರ ಹರಿಯುತ್ತಲೇ ಇತ್ತು.
ಮತದಾರರನ್ನು ಮರಳು ಮಾಡುವುದರಲ್ಲಿ ಗೌಡರ ಕುಟುಂಬ ಎತ್ತಿದ ಕೈ ಎಂಬ ಆರೋಪವಿದೆ. ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಸಂದಿಗ್ಧ ಕಾಲದಲ್ಲಿ ಮತದಾರರ ಮನಸೆಳೆಯಲು ವಿಶಿಷ್ಟ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದರು. ಅದನ್ನೇ ಕುಮಾರಸ್ವಾಮಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ರಾಮನಗರ ಕುಮಾರಸ್ವಾಮಿ ಅವರ ಕರ್ಮಭೂಮಿ. ಅಲ್ಲದೇ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರ ರಾಜ್ಯ ಮುಖ್ಯಮಂತ್ರಿಯಾದರು. ನಂತರ ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸಿದರು. ಅನೇರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹೀಗಿದ್ದಾಗ ಈ ಕ್ಷೇತ್ರದಲ್ಲಿ ಆಕಸ್ಮಿಕವಾಗಿ ಪಕ್ಷ ಸೋಲುಂಡರೆ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಕುಮಾರಸ್ವಾಮಿ ಅವಕ ಆತಂಕ ಇರಬಹುದು.
(ದಟ್ಸ್ ಕನ್ನಡ ವಾರ್ತೆ)