ಸಾತನೂರಿನಲ್ಲಿ ಸದ್ದಿಲ್ಲದ ಕ್ರಾಂತಿ
ಪಾಪ, ಹಳ್ಳಿ ಮನುಷ್ಯ, ಕುರುಚಲು ಗಡ್ಡ. ಹೆಸರು ನಾಗಭೂಷಣ ಅಚಲು. ಕಣ್ಣುಬಿಟ್ಟು ಕಣ್ಣು ತೆಗೆಯುವಷ್ಟರಲ್ಲಿ ಆ ಅಂಗಡಿಯಾತ ನಾಗಭೂಷಣನ ಅರ್ಜಿಯನ್ನು ಅಲ್ಲಿಂದ 40 ಕಿಮೀ ದೂರದಲ್ಲಿರುವ ರಾಜ್ಯ ಸರಕಾರದ ಇಂಟರ್ನೆಟ್ ವಿಳಾಸಕ್ಕೆ ಕಳಿಸಿಬಿಟ್ಟ. ಇದೇನು ಮಹಾ ಚಮತ್ಕಾರವಲ್ಲ. ಆದರೆ, ಗ್ರಾಮೀಣ ಭಾರತಕ್ಕೆ ಮಾತ್ರ ಒಂದು ಕ್ರಾಂತಿಯ ವಿಚಾರ!
ನಾಗಭೂಷಣ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದವ. ಈ ಜನಾಂಗದವರನ್ನು ಶೆಡ್ಯೂಲ್ಡ್ ಕ್ಯಾಸ್ಟಿಗೆ ಸೇರಿದವರೆಂದು ಕರೆಯುತ್ತಾರೆ. ಮುಂಚೆಲ್ಲ ಅವರನ್ನು ಅಸ್ಪೃಷ್ಯರೆಂದು ಬಣ್ಣಿಸಲಾಗುತ್ತಿತ್ತು. ನಾಗಭೂಷಣನಿಗೆ ಅಬ್ಬಬ್ಬಾ ಎಂದರೆ ವರ್ಷಕ್ಕೆ 5000 ರೂಪಾಯಿ ಆದಾಯ ಬರಬಹುದು. ತನ್ನ ಚೋಟುದ್ದ ಭೂಮಿಯಲ್ಲಿ ಆ ವರ್ಷ ಭತ್ತ, ಕಾಳು ಬೆಳೆದರೆ ಮಾತ್ರ ಎರಡು ಹೊತ್ತು ಊಟ. ಆದರೂ ಅವನು ಚಿಂತಿತನಾಗಿಲ್ಲ. ಅವನಿಗೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಕಣ್ತುಂಬ ಭರವಸೆ ಇದೆ. ತನ್ನ ಮಕ್ಕಳನ್ನು ಶಾಲೆಗೆ ಕಳಿಸಿ ಅವರಿಗೆ ವಿದ್ಯಾಭ್ಯಾಸ ಕೊಡಿಸುವುದಕ್ಕೆ ಆತನಿಗೆ ಈಗ ಅಷ್ಟೇನು ಕಷ್ಟವಾಗದು.
ಏಕೆಂದರೆ, ಕರ್ನಾಟಕದಲ್ಲಿನ ಖಾಸಗಿ ಶಾಲೆಗಳು ಶೆಡ್ಯೂಲ್ಡ್ ಕ್ಯಾಸ್ಟ್ ಮಕ್ಕಳಿಂದ ಶುಲ್ಕ ತೆಗೆದುಕೊಳ್ಳುವುದಿಲ್ಲ. ಆತನ ಇಬ್ಬರೂ ಮಕ್ಕಳು ಶಾಲೆಗೆ ಹೋಗಬಹುದು, ಉಚಿತ ವಿದ್ಯಾಭ್ಯಾಸದ ಸವಲತ್ತುಗಳನ್ನು ಪಡೆಯಬಹುದು. ಆದರೆ, ಒಂದು ಕಂಡೀಷನ್. ಅವರ ಅಪ್ಪ ತನ್ನ ಬಡತನವನ್ನು ಸಾದರಪಡಿಸಲು ಜಾತಿ ಮತ್ತು ಆದಾಯದ ಪ್ರಮಾಣ ಪತ್ರಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು.
ತೀರ ಅಗತ್ಯವಾದ ಇಂಥ ಪ್ರಮಾಣ ಪತ್ರ ಪಡೆಯುವುದಕ್ಕೆ ನಾಗಭೂಷಣ ಹೆಣಗಬೇಗಿತ್ತು. ಇಪ್ಪತ್ತೆಂಟು ಕಿರಿಕಿರಿ, ಅವರಿವರ ಕೈಬೆಚ್ಚಗೆ ಮಾಡಬೇಕಾದ ಕಾಲವೊಂದಿತ್ತು. ಆದರೆ, ಪರಿಸ್ಥಿತಿ ಈಗ ಹಾಗಿಲ್ಲ. ಇಂಟರ್ನೆಟ್ಟಿನ ಅಂಗಡಿಯವನು ನೆರವಿಗೆ ಬಂದನಂತರ ನಾಗಭೂಷನಂತಹವರ ಎಷ್ಟೋ ತಾಪತ್ರಯಗಳು ಕಣ್ಮರೆಯಾಗುತ್ತಿವೆ. ಮುಂದೆ ಓದಿ.....