ಆರೋಗ್ಯ ಇಲಾಖೆ ಸತ್ತಿದೆ :ಎಂಸಿ ನಾಣಯ್ಯ

ಆರೋಗ್ಯ ಇಲಾಖೆ ಸತ್ತಿದೆ. ಕೆಲಸಕ್ಕೆ ಬಾರದ ಇಂತಹ ಇಲಾಖೆ ಏಕೆ ಬೇಕು ? ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳಿಂದ ಕಾಯಿಲೆಗಳು ಜನರನ್ನು ಕಿತ್ತು ತಿನ್ನತೊಡಗಿವೆ. ಇದ್ದೂ ಇಲ್ಲದಂತಾಗಿರುವ ಇಲಾಖೆಯನ್ನು ಮುಚ್ಚಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದಿರುವುದು ನಾವು ಮಾಡಿದ ತಪ್ಪಲ್ಲ. ಈ ಹಿಂದೆ ಇದ್ದವರು ಮಾಡಿದ ತಪ್ಪು ಎಂದು ಹೇಳಿದ ಮಾತಿಗೆ ಪ್ರತಿಪಕ್ಷಗಳಿಗೆ ಕೆರಳಿಸುವಂತೆ ಮಾಡಿತು. ಸಚಿವರ ವಿರುದ್ಧ ಹರಿಹಾಯ್ದ ಪ್ರತಿಪಕ್ಷಗಳು ನೀವು ಮಾಡುತ್ತಿರುವ ಘನಕಾರ್ಯವನ್ನು ತೋರಿಸಿ ಎಂದು ಏರಿದ ಧ್ವನಿಯಲ್ಲಿ ಮಾತಿಗಿಳಿದರು.
ಕೂಡಲೇ ಶ್ರೀರಾಮುಲು ಬೆಂಬಲಕ್ಕೆ ನಿಂತ ಸಚಿವ ಜನಾರ್ದನರೆಡ್ಡಿ, ನಾವು ಆಡಳಿತಕ್ಕೆ ಬಂದು ಒಂದು ವರ್ಷವಾಗಿದೆ. ಆಡಳಿತ ನಡೆಸಿದ ಇವರು ರಾಜ್ಯವನ್ನು ಹಾಳು ಮಾಡಿದ್ದಾರೆ. ಹಿರಿಯರಾದ ನಾಣಯ್ಯ ಅವರು ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಮೊದಲು ಬಿಪಿಯನ್ನು ಚೆಕ್ ಮಾಡಿಸಿಕೊಳ್ಳಿ ಎಂದು ಹೇಳಿದ ಮಾತಿಗೆ ಸದನದಲ್ಲಿ ತೀವ್ರ ಕೋಲಾಹಲ ಉಂಟಾಯಿತು. ಈ ಮಾತಿಗ ತೀವ್ರವಾಗಿ ಕೋಪಗೊಂಡ ಸದಸ್ಯ ಶ್ರೀಕಂಠೇಗೌಡ, ಪ್ರತಿಪಕ್ಷದವರು ಪ್ರಶ್ನೆ ಕೇಳಿದರೆ ಸಮಾಧಾನದಿಂದ ಉತ್ತರಿಸಬೇಕಾಗಿರುವುದು ಸರಕಾರದ ಕರ್ತವ್ಯ. ಅದನ್ನು ಬಿಟ್ಟು ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.
ಸರಕಾರದ ವಿರುದ್ಧ ಸಿದ್ದು ಪ್ರಹಾರ
ರಸಗೊಬ್ಬರ ಹಾಗೂ ಬಿತ್ತನೆ ಬೀಜ ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು. ರಸಗೊಬ್ಬರ ಸಮಸ್ಯೆ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆಂಬ ವಿಷಯ ಆಧರಿಸಿ ನಿಯಮ 60ರ ಅಡಿಯಲ್ಲಿ ನಿಲುವಳಿ ಮಂಡಿಸಲು ಪ್ರಾಸ್ತವಿಕ ಭಾಷಣ ಮಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆದ ಕೊರತೆಯೇ ಇಲ್ಲ. ಆದರೆ, ಸಮರ್ಪಕವಾಗಿ ವಿತರಣೆ ಮಾಡುವಲ್ಲಿ ಸರಕಾರ ವಿಫಲವಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಬಿದ್ದಿದ್ದು, 70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿಗೆ ಸಿದ್ಧತೆ ನಡೆಸಲಾಗಿದ್ದು, ಇನ್ನು 244 ಹೋಬಳಿಗಳಲ್ಲಿ ಮಳೆ ಬಿದ್ದಿಲ್ಲ ಎಂದು ಸದನದಲ್ಲಿ ವಿವರಣೆ ನೀಡಿದರು. ರಾಜ್ಯಕ್ಕೆ 4 ಲಕ್ಷ ಟನ್ ಯೂರಿಯಾ ಸಾಕು. ಇಷ್ಟು ಯೂರಿಯಾ ರಾಜ್ಯದಲ್ಲಿ ಲಭ್ಯವಿದ್ದರೂ, ಆಭಾವ ಸೃಷ್ಟಿಸಿದ ಕಾರಣವೇನು ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಹಾಗೂ ಕೃಷಿ ಸಚಿವರು ಭಿನ್ನ ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದ-ಈಶ್ವರಪ್ಪ ಜಟಾಪಟಿ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ನಡುವೆ ಮಾತಿನ ಚಕಮಕಿ ನಡೆದ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು. ಪ್ರಶ್ನೋತ್ತರ ಕಲಾಪ ನಂತರ ಸರಗೊಬ್ಬರ ಕೊರತೆ ಸಂಬಂಧ ನಿಲುವಳಿ ಸೂಚನೆಗೆ ಮುಂದಾದ ಸಿದ್ದರಾಮಯ್ಯ ಅವರಿಗೆ ಛೇಡಿಸಿದ ಈಶ್ವರಪ್ಪ, ಮೊನ್ನೆ ಮೈಸೂರು ಕೋಮುಗಲಭೆ ವಿಷಯವನ್ನು ಪ್ರಸ್ತಾಪಿಸಿದ್ರಿ, ಆದರೆ ಈ ವಿಷಯವನ್ನು ಕೈಬಿಟ್ಟು ಈಗ ರಸಗೊಬ್ಬರ ಎತ್ತಿದ್ದೀರಿ ಎಂದು ಚುಚ್ಚಿದರು. ಅಲ್ಲದೇ ಮೊದಲ ಎತ್ತಿದ ವಿಷಯ ಬಿಟ್ಟು ಬೇರೆ ವಿಷಯದತ್ತ ಹೋಗುವುದು ನಿಯಮ ಆದರೆ, ಮೊದಲಿನ ವಿಷಯ ಬಿಟ್ಟು ಬೇರೊಂದು ವಿಷಯವನ್ನು ಪ್ರಸ್ತಾಪಿಸುತ್ತಿರುವ ಪ್ರತಿಪಕ್ಷದ ಬಗ್ಗೆ ಜನರು ಏನಂದುಕೊಂಡಾರು ಎಂದರು.
ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ಹೇಳಿಗೆ ಗದ್ದಲ ಆರಂಭಿಸಿದರು. ತಕ್ಷಣ ಎದ್ದು ನಿಂತ ಸಿದ್ದರಾಮಯ್ಯ ನಗೆಪಾಟಲಿಗೆ ಈಡಾಗಿರುವುದು ಯಾರೆಂಬುದು ಇಡೀ ದೇಶಕ್ಕೆ ಗೊತ್ತಿದೆ. ನಿಮ್ಮಿಂದ ಕಲಿಯುವ ಅಗತ್ಯವಿಲ್ಲ ಎಂದು ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications