ಕೂರ್ಗ್ ಕರ್ನಾಟಕದ ಅವಿಭಾಜ್ಯ ಅಂಗ: ಬಿಎಸ್ ವೈ
ಬೆಂಗಳೂರು, ಜೂ.29: ಕೂರ್ಗ್(ಕೊಡಗು) ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಅದನ್ನು ಪ್ರತ್ಯೇಕಿಸಲು ಬಿಡುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು. ಕೇಂದ್ರ ಸರ್ಕಾರ ಕೊಡಗನ್ನು ಪ್ರತ್ಯೇಕಿಸಲು ಯಾವುದೇ ಒತ್ತಡ ತಂದರೂ ರಾಜ್ಯ ಸರ್ಕಾರ ಮಣಿಯುವುದಿಲ್ಲ ಎಂದು ಸಿಎಂ ಘೋಷಿಸಿದರು.
ಕನ್ನಡ ನಾಡು ನುಡಿಗೆ ಕೊಡವರ ಸೇವೆ ಅನನ್ಯ. ಕರ್ನಾಟಕ ಏಕೀಕರಣ ನಂತರ ಅಖಂಡ ಕರ್ನಾಟಕದ ಪುಟ್ಟ ಜಿಲ್ಲೆಯಾಗಿ ಕೊಡಗು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಎಲ್ಲ ಜಿಲ್ಲೆಗಳಿಗೂ ಸಮಾನ ಆದ್ಯತೆ ನೀಡಲಾಗುತ್ತಿದೆ. ಅಭಿವೃದ್ಧಿ ಕಾರ್ಯದಲ್ಲಿ ಲೋಪ ಕಂಡುಬಂದರೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು. ಕರ್ನಾಟಕದ ಸಾಂಸ್ಕೃತಿಕ, ನೈಸರ್ಗಿಕ, ವೀರತ್ವದ ಸಂಕೇತವಾದ ಕೊಡಗನ್ನು ಎಂದು ಕೈ ಬಿಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಹಂಸ್ ರಾಜ್ ಭಾರಧ್ವಾಜ್ ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದಿಂದ ಸಿಗಬೇಕಾದ ಹಲವು ಯೋಜನೆಗಳನ್ನು ರಾಜ್ಯಕ್ಕೆ ತರಲು ನೆರವಾಗಲಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವರೆಂಬ ವಿಶ್ವಾಸ ನಮಗಿದೆ ಎಂದು ಸಿಎಂ ಹೇಳಿದರು.
(ದಟ್ಸ್ ಕನ್ನಡವಾರ್ತೆ)