ಸಿದ್ದು ಮೇಲಿದ್ದ 17 ಕೇಸ್ ವಾಪಸ್ಸು : ಆಚಾರ್ಯ
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಸೂರಿನ ಜೈಪುರ ಪೊಲೀಸ್ ಠಾಣೆಯಲ್ಲಿ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರ ಮೇಲಿದ್ದ 17 ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಉಪಚುನಾವಣೆಯ ಸಂದರ್ಭದಲ್ಲಿ ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಮೇಲೆ ಒಟ್ಟು 17 ಕೇಸ್ ಗಳನ್ನು ದಾಖಲಿಸಲಾಗಿತ್ತು. ಸಂಪುಟ ಸಭೆಯಲ್ಲಿ ಚರ್ಚಿಸಿ ಸಿದ್ದರಾಮಯ್ಯ ಅವರ ಮೇಲಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯಲು ನಿರ್ಧರಿಸಲಾಯಿತು ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ವಿವರಿಸಿದರು. ಅಲ್ಲದೇ ಚಿಕ್ಕಬಳ್ಳಾಪುರದಲ್ಲಿ 20 ಕೋಟಿ ರುಪಾಯಿಗಳ ಸರಕಾರಿ ಕಟ್ಟಡ ಮತ್ತು ದಾವಣಗೆರೆಯಲ್ಲಿ ವಿವಿ ಸ್ಥಾಪಿಸಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮೈಸೂರಿನ ಜೈಪುರ ಪೊಲೀಸ್ ಠಾಣೆಯಲ್ಲಿ ನನ್ನ ಹಾಗೂ ಬೆಂಬಲಿಗರ ಮೇಲೆ ಸುಳ್ಳು ಕೇಸ್ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ನಾನು ಅಸೆಂಬ್ಲಿಯಲ್ಲಿ ಗಲಾಟೆ ಮಾಡಿದ್ದೆ. ಒತ್ತಡಕ್ಕೆ ಮಣಿದಿದ್ದ ಸರಕಾರ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಿತ್ತು. ವಿಚಾರಣೆ ನಂತರ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಿಓಡಿ ಸರಕಾರಕ್ಕೆ ವರದಿ ಸಲ್ಲಿಸಿ ಅವರ ಮೇಲಿರುವ ಪ್ರಕರಣಗಳನ್ನು ಕೈಬಿಡಿ ಎಂದು ತಿಳಿಸಿತ್ತು.
ಆನಂತರ ನಾನು ಸರಕಾರಕ್ಕೆ ಪತ್ರ ಬರೆದು ಸಿಓಡಿ ವರದಿಯಲ್ಲಿ ನನ್ನ ಮೇಲಿರುವ ಮೊಕದ್ದಮೆ ಸುಳ್ಳು ಎಂದು ಬಂದಿದೆ. ಆದ್ದರಿಂದ ಕೂಡಲೇ ಮೊಕದ್ದಮೆಗಳನ್ನು ಕೈಬಿಡಿ. ಬಡಪಾಯಿ ಬೆಂಬಲಿಗರು ಕೋರ್ಟ್ ಗೆ ಅಲೆಯುವುದನ್ನು ತಪ್ಪಿಸಿ ಎಂದು ಪತ್ರ ಬರೆದಿದ್ದೆ. ಇದೀಗ ಸರಕಾರ ಮೊಕದ್ದಮೆ ವಾಪಸ್ಸು ಪಡೆದುಕೊಂಡಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ರಾಜಕೀಯ ಹಿತಾಸಕ್ತಿಯೂ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕರಂದ್ಲಾಜೆ ಎಲ್ಲಿ ?
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಸಚಿವ ಸಂಪುಟದಲ್ಲಿ ತೆಗೆದುಕೊಳ್ಳುವ ಅಷ್ಟೂ ತೀರ್ಮಾನಗಳನ್ನು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಗಳಿಗೆ ವಿವರಿಸುತ್ತಿದ್ದರು. ಆದರೆ, ಪಕ್ಷದಲ್ಲಿ ಎದ್ದಿದ್ದ ಭಿನ್ನಮತದಲ್ಲಿ ಶೋಭಾ ಕರಂದ್ಲಾಜೆ ಅವರು ಎಲ್ಲ ವಿಷಯದಲ್ಲಿ ಮೂಗು ತೋರಿಸುತ್ತಾರೆ ಎನ್ನುವ ಅನೇಕ ಆರೋಪಗಳು ಅವರ ವಿರುದ್ಧ ಕೇಳಿಬಂದವು. ಇದರಿಂದ ನೊಂದಿರುವ ಶೋಭಾ ಕರಂದ್ಲಾಜೆ ಇದರ ಉಸಾಬರಿ ಎಂದುಕೊಂಡು ದೂರ ಉಳಿದಿರಬಹುದು. ಭಿನ್ನಮತ ಶಮನದ ನಂತರ ನಡೆದ ಮೂರು ಸಚಿವ ಸಂಪುಟ ವಿವರವನ್ನು ಎರಡು ಬಾರಿ ಸಚಿವ ಆಚಾರ್ಯ ವಿವರಿಸಿದರೆ, ಒಂದು ಸಲ ಸಚಿವ ಸುರೇಶ ಕುಮಾರ್ ವಿವರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)