ಬೆಂಗಳೂರು ವಿವಿ : ಸಾಮೂಹಿಕ ನಕಲು ಬಹಿರಂಗ

ಇತ್ತೀಚೆಗೆ ಬೆಂಗಳೂರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವತಿಯಂದ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಕೂಡಾ ಸಾಮೂಹಿಕ ನಕಲು ಅಲ್ಲದೇ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳು ಕೂಡಾ ದುಡ್ಡಿಗಾಗಿ ಮಾರಿಕೊಳ್ಳಲಾಗುತ್ತಿರುವ ಸಮಗ್ರವಾದ ವರದಿಯೊಂದನ್ನು ಕಳೆದ ಶನಿವಾರ ಟಿವಿ 9 ಮತ್ತು ನ್ಯೂಸ್ 9 ವಾಹಿನಿಗಳು ಬಯಲಿಗೆ ಎಳೆದಿದ್ದವು. ಈ ಕೃತ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗುತ್ತಿದ್ದು, ಸಾರ್ವಜನಿಕರಿಂದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇಂದು ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಇಲಾಖೆ ವತಿಯಿಂದ ಮೈಸೂರಿನ ಸತ್ಯಜ್ಯೋತಿ ಸಂಸ್ಥೆಯಲ್ಲಿ ಬಿಕಾಂ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಯಲ್ಲಿ ಸುಮಾರು 33 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳೆಲ್ಲ ಸಾಮೂಹಿಕ ನಕಲಿನಲ್ಲಿ ತೊಡಗಿದ್ದರು. ಬೆಂಗಳೂರು ವಿವಿಯಿಂದ ತೆರಳಿದ್ದ ಪರೀಕ್ಷೆ ಮೇಲ್ವಿಚಾರಕ ಬಿರಾದಾರ್ ಎಂಬುವವರ ಸಮಕ್ಷಮದಲ್ಲೇ ವಿದ್ಯಾರ್ಥಿಗಳು ಗೈಡ್, ಪುಸ್ತಕಗಳನ್ನು ತೆಗೆದುಕೊಂಡು ಪರೀಕ್ಷೆ ಬರೆಯುತ್ತಿದ್ದರು.
ಇದನ್ನು ಅರಿತ ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪರೀಕ್ಷಾ ಕೇಂದ್ರಕ್ಕೆ ದಾಳಿ ನಡೆಸಿದ್ದಲ್ಲ, ಮೇಲ್ವಿಚಾರಕ ಬಿರಾದಾರ್ ಹಾಗೂ ಸತ್ಯಜ್ಯೋತಿ ಕಾಲೇಜಿನ ಪ್ರಾಚಾರ್ಯ ಬಾಲಕೃಷ್ಣ ಎಂಬುವವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಅವರನ್ನ ಮೈಸೂರಿನ ದೇವರಾಜ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪರೀಕ್ಷಾ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ತಲಾ 2000 ರುಪಾಯಿಗಳನ್ನು ಪಡೆದುಕೊಂಡು ನಕಲು ಮಾಡಲು ಅವಕಾಶ ಮಾಡಿಕೊಟ್ಟಿದ್ದರು ಎಂಬ ದೂರು ಕೇಳಿಬಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications