ರೆಡ್ಡಿ ಸೋದರರ ಮೇಲಿನ ಕೇಸ್ ಗಳು ಖಲಾಸ್
ಬೆಂಗಳೂರು, ಜೂ. 19: ಬಳ್ಳಾರಿ ಗಣಿ ಧಣಿಗಳ ವಿರುದ್ಧ ಹೇರಲಾಗಿದ್ದ ಸುಮಾರು 16 ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ಮೂಲಕ ರಾಜ್ಯ ಸರ್ಕಾರ ರೆಡ್ಡಿ ಸೋದರರ ಓಲೈಕೆಗೆ ಮುಂದಾಗಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿವಾದಿತ ಓಬಳಾಪುರಂ ಗಣಿವ್ಯಾಪ್ತಿಯಲ್ಲಿರುವ ಸುಮಾರು ಎರಡು ಶತಮಾನದಷ್ಟು ಹಳೆಯದಾದ ಐತಿಹಾಸಿಕ ಸುಗ್ಗಲಮ್ಮ ದೇವಸ್ಥಾನ ನೆಲಸಮ ಪ್ರಕರಣ ವಾಪಾಸ್ ಪಡೆದಿರುವುದು ಪ್ರತಿಪಕ್ಷಗಳ ನಾಯಕರ ಕಣ್ಣು ಕೆಂಪಗಾಗಿಸಿದೆ. ಕಬ್ಬಿಣದ ಅದಿರು ಸಾಗಿಸಲು ಈ ಐತಿಹಾಸಿಕ ದೇವಾಲಯವನ್ನು ಸೆ. 3, 2006 ರಲ್ಲಿ ನೆಲಸಮ ಮಾಡಲಾಗಿತ್ತು.
ಇದಲ್ಲದೆ ಬಳ್ಳಾರಿ ವಿಧಾನಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳ ವೇಳೆಯಲ್ಲಿ ಬಳ್ಳಾರಿ ಗಣಿಧಣಿಗಳು ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ 16 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಹಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದೇ ಕೂಡ. ಆದರೆ ಎಲ್ಲಾ ಪ್ರಕರಣಗಳಿಂದ ರೆಡ್ಡಿ ಸೋದರರಿಗೆ ಕ್ಲೀನ್ ಚೀಟ್ ನೀಡುವ ಯಡಿಯೂರಪ್ಪ ಅವರ ನಿರ್ಧಾರಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ರೆಡ್ಡಿ ಸಚಿವರುಗಳ ಬೆಂಬಲಿಗರ ಮೇಲೆ ಐಪಿಸಿ ಸೆಕ್ಷನ್143, 147, 120, 295, 436 ಮತ್ತು 506 ಅಡಿಯಲ್ಲಿ ಹೇರಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗಿದೆ. ರೈತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರ ಮೇಲಿನ ಕೆಲ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಈ ಮೂಲಕ ಭುಗಿಲೆದಿದ್ದ ಭಿನ್ನಮತಕ್ಕೆ ಯಡಿಯೂರಪ್ಪ ಇತಿಶ್ರೀ ಹಾಡಿದ್ದಾರೆ. ದಾವಣಗೆರೆಯಲ್ಲಿ ನಡೆದ ವಿಕಾಸ ಸಂಕಲ್ಪ ಉತ್ಸವದಲ್ಲಿ ಸಿಎಂ ಹಾಗೂ ರೆಡ್ಡಿ ಸಹೋದರರ ಜತೆ ನಡೆದ ಮಾತುಕತೆಯ ಫಲ ಇದಾಗಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಗಂಗೆ ತಂದ ಅಧುನಿಕ ಭಗೀರಥ ಶೆಟ್ಟಿ ಸ್ಥಿತಿ- ಗತಿ
ನಿರೀಕ್ಷೆಯಂತೆ ರಾಜ್ಯ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿ ಕೃಷ್ಣಯ್ಯಶೆಟ್ಟಿ ಅವರನ್ನು ಕೂರಿಸಲಾಗಿದೆ. ಇದರಿಂದಾಗಿ ಸಚಿವ ಸ್ಥಾನದಲ್ಲಿದ್ದ ಸೌಲಭ್ಯಗಳು ಹಾಗೆ ಮುಂದುವರೆಯಲಿದ್ದು, ಹೌಗೌಂಡ್ಸ್ ಬಳಿಯ ಸರ್ಕಾರಿ ಬಂಗ್ಲೆ ಶೆಟ್ಟಿಯ ಆವಾಸ ಸ್ಥಾನವಾಗಲಿದೆ. ವರ್ತೂರು ಪ್ರಕಾಶ್ ಅವರನ್ನು ಇತ್ತೀಚೆಗೆ ಈ ಸ್ಥಾನದಿಂ ವಜಾಗೊಳಿಸಲಾಗಿತ್ತು.
ಹಿರಿಯ ಹಿತ ಚಿಂತಕರ ಸಲಹೆಯಂತೆ 6 ಗುಜರಾತಿ ಸಿಂಧಿ ಹಸುಗಳನ್ನು ಸಾಕಲು ಶೆಟ್ಟಿ ಮುಂದಾಗಿದ್ದಾರೆ. ಹಸುಗಳನ್ನು ನೋಡಿಕೊಳ್ಳಲು ರಾಜಾಜಿನಗರದ ಮನೆಯನ್ನು ಬಳಸುತ್ತಿದ್ದಾರೆ. ಇದರಿಂದ ಬಿಜೆಪಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆ ಫಲ ದೊರೆಯಲಿದೆ ಎಂದು ಶೆಟ್ಟಿ ಹೇಳಿದರು. ಒಟ್ಟಿನಲ್ಲಿ ಯಡಿಯೂರಪ್ಪ ಭಿನ್ನಮತವನ್ನು ತಾತ್ಕಾಲಿಕವಾಗಿ ಆದರೂ ಶಮನ ಮಾಡಿ, ಅಭಿವೃದ್ಧಿ ಪಥದತ್ತ ಹೆಜ್ಜೆ ಇರಿಸಲು ಮುಂದಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)