ಕೆಎಸ್ಸಾರ್ಟಿಸಿ ದೇಶದಲ್ಲೇ ಮಾದರಿ ನಿಗಮ : ಅಶೋಕ್

ಅವರು ಮಂಗಳವಾರ ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲ್ಲೂಕು ಮಿರ್ಲೆ ಗ್ರಾಮದಲ್ಲಿ ರು.27.80 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸುಸಜ್ಜಿತ ಬಸ್ನಿಲ್ದಾಣವನ್ನು ಉದ್ಘಾಟಿಸಿ ಹಾಗೂ ಕೆ ಆರ್ ನಗರ ಬಸ್ನಿಲ್ದಾಣವನ್ನು 2.5 ಕೋಟಿರು.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಿಲಾನ್ಯಾಸ ಮಾಡಿ ಮಾತನಾಡಿದರು. ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಾದ ಮೇಲುಕೋಟೆ, ಮಲೆ ಮಹದೇಶ್ವರ ಬೆಟ್ಟ ಹಾಗೂ ಕೆ ಆರ್ ಪೇಟೆ, ಗುಂಡ್ಲುಪೇಟೆಗಳ ಬಸ್ ನಿಲ್ದಾಣವನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದರು.
7 ರಿಂದ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳಿಗೆ ಬಸ್ಪಾಸ್ ದರದಲ್ಲಿ ಶೇ.25ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದ ಸಚಿವರು, ರಾಜಧಾನಿಯಲ್ಲಿರುವಂತೆ ಹೈಟೆಕ್ ಬಸ್ನಿಲ್ದಾಣಗಳಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ಹೈಟೆಕ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಈಗಾಗಲೇ ನಿಗಮದಲ್ಲಿ 6058 ಜನ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಂಡಿದ್ದು, ಇವರಲ್ಲಿ ೪೦೩೫ ಜನ ನಿರ್ವಾಹಕರು / ಚಾಲಕರಾಗಿದ್ದಾರೆ. ಉಳಿದಂತೆ ಕುಶಲಕರ್ಮಿಗಳು, ಇತರರು ಸೇರಿದ್ದಾರೆಂದರು.
ಈಗ ನೇಮಕವಾಗಿರುವವರೆಲ್ಲಾ ನೂರಕ್ಕೆ ನೂರರಷ್ಟು ಕನ್ನಡಿಗರಾಗಿದ್ದಾರೆ, ನಾಡಿನ ಅಭ್ಯುದಯವೇ ನಮ್ಮ ಸರ್ಕಾರದ ಗುರಿ ಎಂದ ಸಚಿವರು ಮಡಿಲು ಆರೋಗ್ಯ ಯೋಜನೆಯನ್ನು ಬೆಂಗಳೂರು ನಗರ ವಾಸಿಗಳಿಗೂ ಕಲ್ಪಿಸಿಕೊಡಲಾಗುವುದೆಂದು ತಿಳಿಸಿದರು. ಸಾರಿಗೆ ಇಲಾಖೆಯಲ್ಲಿ ಪರಿವರ್ತನೆಯ ಪರ್ವ ಆರಂಭವಾಗಿದ್ದು, ಪ್ರಯಾಣಿಕರಿಗೆ ಸಕಲ ಸೌಲಭ್ಯಗಳಿಂದ ಕೂಡಿದ ಸುಖಕರ ಪ್ರಯಾಣ ನಿಗಮದ ಗುರಿ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಕೆ ಆರ್ ನಗರ ಶಾಸಕ ಸಾ ರಾ ಮಹೇಶ್ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಹಂಗಾಮಿ ಅಧ್ಯಕ್ಷರಾದ ಸಿದ್ದಪ್ಪ ಮುಂತಾದ ಗಣ್ಯರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications