ಶಾಸಕ ಸ್ಥಾನಕ್ಕೆ ಎಚ್ಡಿಕೆ, ಖರ್ಗೆ ರಾಜೀನಾಮೆ
ಲೋಕಸಭೆ ಚುನಾವಣೆಗೂ ಪೂರ್ವದಲ್ಲಿ ತೃತೀಯ ರಂಗದೊಂದಿಗೆ ಗುರುತಿಸಿಕೊಂಡಿದ್ದ ದೇವೇಗೌಡ, ಮತದಾನದ ನಂತರ ಬದಲಾದ ವಾತಾವರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಡೆಗೆ ಮುಖಮಾಡಿದರು. ಇದರ ಪರಿಣಾಮವಾಗಿ ಕುಮಾರಸ್ವಾಮಿ ಅವರು ಯುಪಿಎ ಬೆಂಬಲ ಸೂಚಿಸಲು ಹಿಂಬಾಗಿಲು ಮೂಲಕ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಹೋಗಿ ಸಿಕ್ಕಿಬಿದ್ದರು. ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದುಕೊಳ್ಳುವ ಉದ್ದೇಶದಿಂದ ಈ ಎಲ್ಲ ಕಸರತ್ತು ಮಾಡಿದರು ಎನ್ನುವುದು ಗುಟ್ಟಾಗಿ ಉಳಿಯಲಿಲ್ಲ.
ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀರಿ ಜಯಗಳಿಸಿತ್ತು. ಕೇವಲ ಮೂರು ಸಂಸದರನ್ನು ಹೊಂದಿರುವ ಜೆಡಿಎಸ್ ಸಂಪುಟದಲ್ಲಿ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಸೋನಿಯಾ ಸ್ಪಷ್ಟಪಡಿಸಿದರು. ಅಲ್ಲದೇ ಆರು ಸಂಸದರಿಗೆ ಒಂದು ಸಚಿವ ಸ್ಥಾನ ನೀಡುವ ವಿಷಯಕ್ಕೆ ಕಾಂಗ್ರೆಸ್ ನಾಯಕರು ಕಟ್ಟುಬಿದ್ದರು. ಇದರಿಂದ ಕುಮಾರಸ್ವಾಮಿ ಅವರ ಕನಸು ಭಗ್ನಗೊಂಡಿತು.
ಆಂಧ್ರಪ್ರದೇಶದಲ್ಲಿ ರಾಜಶೇಖರರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆಂಧ್ರಪ್ರದೇಶ ರೆಡ್ಡಿ, ಬಳ್ಳಾರಿ ರೆಡ್ಡಿ ಇಬ್ಬರೂ ಗಳಸ್ಯ-ಕಂಠಸ್ಯ ಎನ್ನಲಾಗಿದೆ. ಜೊತೆಗೆ ಮೈಸೂರು ಮತ್ತು ಚಾಮರಾಜನಗರ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟಿರುವ ಸಿದ್ದರಾಮಯ್ಯ ಕೂಡಾ ಕುಮಾರಸ್ವಾಮಿ ಕೇಂದ್ರ ಸಂಪುಟ ಸೇರ್ಪಡೆಗೆ ವಿರೋಧಿಸಿದರು. ಈ ಎಲ್ಲ ಕಾರಣಗಳಿಂದ ಕುಮಾರಸ್ವಾಮಿ ಆಸೆ ಈಡೇರಲಿಲ್ಲ. ರಾಜ್ಯದಲ್ಲಿ ಇನ್ನು ನಾಲ್ಕು ವರ್ಷ ಬಿಜೆಪಿ ಅಧಿಕಾರವಧಿ ಇದೆ. ಅಲ್ಲಿಯರೆಗೂ ಏನೂ ಮಾಡಲು ಸಾಧ್ಯವಿಲ್ಲ. ಸಂಸದನಾಗಿದ್ದರೆ ಸೋನಿಯಾ ಮನವೊಲಿಸಿ ಕೇಂದ್ರದಲ್ಲಿ ಯಾವುದಾದರೂ ಹುದ್ದೆ ಅಲಂಕರಿಸಬಹುದು ಎನ್ನುವುದು ದೇವೇಗೌಡರ ಲೆಕ್ಕಾಚಾರವಾಗಿರಬಹುದು.
(ದಟ್ಸ್ ಕನ್ನಡ ವಾರ್ತೆ)