ರಾಜ್ಯಕ್ಕೆ ನಾಲ್ಕು ಕ್ಯಾಬಿನೆಟ್, ಒಂದು ರಾಜ್ಯ ಖಾತೆ

ಕೇಂದ್ರ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಮತ್ತು ಜೈರಾಮ್ ರಮೇಶ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಸೋನಿಯಾ ಗಾಂಧಿ ಅವರ ನಿಕಟವರ್ತಿ ಎನ್ನಲಾದ ಆಸ್ಕರ್ ಫರ್ನಾಂಡೀಸ್ ಅವರಿಗೂ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಮನಸ್ಸು ಮಾಡಿತ್ತು. ಆದರೆ, ಆಸ್ಕರ್ ಅವರು ಸಚಿವ ಸ್ಥಾನವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಅಂದ ಹಾಗೆ, ಎಚ್ ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಅಲ್ಪಾವಧಿಯನ್ನು ಬಿಟ್ಟರೆ ಕೇಂದ್ರ ಮಂತ್ರಿಮಂಡಲದಲ್ಲಿ ಕರ್ನಾಟಕದ ಪಾಲಿಗೆ ಇಂತಹ ಬಂಪರ್ ಬೆಳೆ ಯಾವಾಗಲೂ ಬಂದಿರಲಿಲ್ಲ. ಈ ಹಿಂದೆ 1996ರಲ್ಲಿ ಕಾಂಗ್ರೆಸ್ ಬಾಹ್ಯ ಬೆಂಬಲದಿಂದ ಕನ್ನಡ ಮಣ್ಣಿನಮಗ ದೇವೇಗೌಡರು ನೇತೃತ್ವದ ಕೇಂದ್ರ ಸರಕಾರದಲ್ಲಿ ರಾಜ್ಯಕ್ಕೆ ಸೇರಿದ ಮೂವರು ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು.
ಎಸ್ ಆರ್ ಬೊಮ್ಮಾಯಿ (ಮಾನವ ಸಂಪನ್ಮೂಲ ಅಭಿವೃದ್ಧಿ), ಆರ್ ಎಲ್ ಜಾಲಪ್ಪ (ಜವಳಿ), ಸಿ ಎಂ ಇಬ್ರಾಹಿಂ (ವಾರ್ತಾ ಮತ್ತು ಪ್ರಸಾರ ಖಾತೆ) ಜೊತೆಗೆ ಕಿರೀಟವಿದ್ದಂತೆ ಪ್ರಧಾನಿಯೇ ಕನ್ನಡಿಗರಾಗಿದ್ದರು. ರಾಜ್ಯ ಪಾಲಿಗೆ 11 ತಿಂಗಳು ಸುವರ್ಣಯುಗವೇ ಆಗಿತ್ತು. ನಂತರ ಬಂದ ಎನ್ ಡಿಎ ಸರಕಾರದಲ್ಲಿ 18 ಬಿಜೆಪಿ ಸಂಸದರಿದ್ದರೂ ಅನಂತಕುಮಾರ್ ಅವರಿಗೆ ಮಾತ್ರ ಕ್ಯಾಬಿನೆಟ್ ಸಚಿವರಾಗಿದ್ದರು. ಆನಂತರ ಅಧಿಕಾರ ಚುಕ್ಕಾಣಿ ಹಿಡಿದ ಮನಮೋಹನ್ ಸಿಂಗ್ ಸರಕಾರದಲ್ಲಿ ಕೂಡಾ ಒಬ್ಬರೂ ಕ್ಯಾಬಿನೆಟ್ ಸಚಿವರು ಇರಲಿಲ್ಲ ಎನ್ನುವುದು ವಿಶೇಷ. ಈ ಕಾರಣಕ್ಕೆ ನೂತನ ಯುಪಿಎ ಸರಕಾರ ರಾಜ್ಯಕ್ಕೆ ಬಂಪರ್ ಬೆಳೆ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications