'ಕೇಂದ್ರ ಸಂಪುಟಕ್ಕೆ ರಾಹುಲ್ ಸೇರ್ಪಡೆಯಾಗಲಿ'
ಬೆಂಗಳೂರು, ಮೇ.25: ಕೇಂದ್ರ ಸಚಿವ ಸಂಪುಟಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಸೇರಿಸಿಕೊಳ್ಳುವುದು ಒಳಿತು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಸೋಮವಾರ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದಿವಂಗತ ಜವಹಾರ್ ಲಾಲ್ ನೆಹರು ಸಚಿವ ಸಂಪುಟದಲ್ಲಿ ಇಂದಿರಾಗಾಂಧಿ ಅವರು ಇದ್ದರು. ಅನುಭವಿ ರಾಜಕಾರಣಿಗಳೊಂದಿಗೆ ಕೆಲಸ ಮಾಡುತ್ತಾ ಇಂದಿರಾಗಾಂಧಿ ಅವರು ಅನುಭವ ಗಳಿಸಿದರು. ಹಾಗೆಯೇ ಪ್ರಧಾನಿ ಮನಮೊಹನ್ ಸಿಂಗ್ ಅವರ ಸಚಿವ ಸಂಪುಟದಲ್ಲಿ ಬಹಳಷ್ಟು ಅನುಭವಿ ರಾಜಕಾರಣಿಗಳಿದ್ದಾರೆ.
ಯುವಕರನ್ನು ಪ್ರೇರೇಪಿಸುತ್ತಾ ಅನುಭವ ಹಾಗೂ ಜ್ಞಾನವನ್ನು ವೃದ್ಧಿಸಿಕೊಂಡು ದೇಶವನ್ನು ಮುನ್ನಡೆಸಲು ರಾಹುಲ್ ಗೆ ಸಾಧ್ಯವಾಗುತ್ತದೆ ಎಂದ ದೇಶಪಾಂಡೆ , ''ಲೋಕಸಭೆ ಚುನಾವಣೆಯಲ್ಲಿ ಯುವಕರನ್ನು ರಾಹುಲ್ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಯುವಕರಿಗೆ ಅವರು ಮಾದರಿಯಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕರ ಹಾರೈಕೆಯಂತೆ ಅವರು ಸಚಿವ ಸಂಪುಟಕ್ಕೆ ಸೇರಿಕೊಳ್ಳಲಿ'' ಎಂದು ಹೇಳಿದರು.
ಕೇಂದ್ರ ಸರಕಾರ ರಾಜ್ಯ ಸರಕಾರದ ವಿಚಾರದಲ್ಲಿ ಮಲತಾಯಿ ಧೋರಣೆ ತಳೆಯುತ್ತಿದೆ ಎಂಬ ಯಡಿಯೂರಪ್ಪ ಅವರ ವಾದದಲ್ಲಿ ಹುರುಳಿಲ್ಲ. ಕೇಂದ್ರ ಸರಕಾರದೊಂದಿಗೆ ಅವರು ಸಹಕರಿಸಿ ರಾಜ್ಯ ಮುನ್ನಡೆಯವಂತೆ ನೋಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಜ್ಯದ ಅಭಿವೃದ್ಧಿಗೆ ಒಟ್ಟಿಗೆ ಶ್ರಮಿಸಬೇಕು ಎಂದರು. ಯುಪಿಎ ಮತ್ತು ಎನ್ ಡಿಎ ಸರಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಿದ ಹಣ ಎಷ್ಟು ಎಂಬುದನ್ನು ಯಡಿಯೂರಪ್ಪನವರು ಹಣಕಾಸು ಕಾರ್ಯದರ್ಶಿಗಳಿಂದ ವಿವರಗಳನ್ನು ತರಿಸಿಕೊಂಡು ನೋಡಲಿ. ಯುಪಿಎ ಸರಕಾರ ರಾಜ್ಯಕ್ಕೆ ಎರಡು ಪಟ್ಟು ಹಣ ಬಿಡುಗಡೆ ಮಾಡಿತ್ತು ಎಂಬ ಸತ್ಯ ನಂತರ ಅವರಿಗೆ ಮನದಟ್ಟಾಗುತ್ತದೆ ಎಂದರು.
(ದಟ್ಸ್ ಕನ್ನಡ ವಾರ್ತೆ)