ದೇವೇಗೌಡರ ಗೆಲುವು ಎಂಟು ಟಗರು ಬಲಿ!
ಅರಕಲಗೂಡು, ಮೇ. 23: ಹಾಸನ ಕ್ಷೇತ್ರದ ಜನತಾದಳ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದರೆ 8 ಟಗರು ಬಲಿ ಕೊಡುವುದಾಗಿ ಅವರ ಕಟ್ಟಾ ಅಭಿಮಾನಿಯೊಬ್ಬ ಹರಕೆ ಹೊತ್ತಿದ್ದ. ಇದನ್ನು ಜಗಜ್ಜಾಹೀರುಗೊಳಿಸಲು ಶುಕ್ರವಾರ ಆತ ಪಟ್ಟಣದಲ್ಲಿ ಜಾತ್ರೆಯ ವಾತಾವರಣವನ್ನೇ ಸೃಷ್ಟಿಸಿದ್ದ.
ಹೊನ್ನವಳ್ಳಿ ನಿವಾಸಿ ಚಿಕ್ಕೇಗೌಡ ಎಂಬುವರು ದೇವೇಗೌಡರು ಚುನಾವಣೆಯಲ್ಲಿ ಜಯಗಳಿಸಿದರೆ ಪಟ್ಟಣದ 'ಅರಸೀಕಟ್ಟೆಯಮ್ಮ ದೇವಿಗೆ ' 8 ಟಗರು ಬಲಿ ಕೊಡುವುದಾಗಿ ಹರಕೆ ಹೊತ್ತಿದ್ದರು. ಗೌಡರು ಹಾಸನ ಕ್ಷೇತ್ರದಲ್ಲಿ ಭಾರಿ ಅಂತರದ ಜಯ ಸಾಧಿಸಿರುವುದರಿಂದ ಚಿಕ್ಕೇಗೌಡರು ಭಾರಿ ಪ್ರಚಾರದೊಂದಿಗೆ ಹರಕೆ ತೀರಿಸಲು ಮುಂದಾಗಿ ಟಗರುಗಳನ್ನು ಸಿಂಗಾರ ಮಾಡಿ ಆಟೋದಲ್ಲಿ ಮೆರವಣಿಗೆ ಮಾಡಿಸಿದರು.
ಮೆರವಣಿಗೆಯಲ್ಲಿ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರುಗಳ ಕಟೌಟ್, ಮಂಗಳೂರಿಂದ ಬಂದ ಬೊಂಬೆ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಮುಂತಾದವು ಜಾನಪ ವರಸೆಗಳು ಜಾತ್ರೆಗೆ ಮೆರುಗು ನೀಡಿತ್ತು. ಮುಂದಿನ ಶುಕ್ರವಾರ ದೇವಿಗೆ ಟಗರುಗಳನ್ನು ಬಲಿ ಕೊಡಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)