ವಕೀಲನ ಸೆರೆಗೆ ಪೊಲೀಸರ ಯತ್ನ : ಪ್ರತಿಭಟನೆ
ಬೆಂಗಳೂರು, ಮೇ. 12 : ಹಿರಿಯ ನಾಗರಿಕರೊಬ್ಬರ ಮಕ್ಕಳ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಸಿದ ವಕೀಲನನ್ನು ಬಂಧಿಸಲು ಬಂದ ಪೊಲೀಸರನ್ನು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನ್ಯಾಯವಾದಿಗಳು ಸೋಮವಾರ ಕೂಡಿ ಹಾಕಿದರು. ಆದರೆ, ಪೊಲೀಸರ ಕ್ರಮವನ್ನು ಆಯುಕ್ತರು ಸಮರ್ಥಿಸಿಕೊಂಡಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಯೊಬ್ಬರನ್ನು ವಾರೆಂಟ್ ಇಲ್ಲದೆ ಬಂಧಿಸಲು ಬಂದ ಜೆಪಿ ನಗರ ಪೊಲೀಸರ ಕ್ರಮವನ್ನು ನ್ಯಾಯವಾದಿಗಳು ಖಂಡಿಸಿದ್ದು, ಮುಖ್ಯಪೇದೆ ಮಂಜುನಾಥ ಎಂಬುವವರನ್ನು ಮೂರು ಗಂಟೆಗೂ ಹೆಚ್ಚು ಕಾಲ ವಕೀಲರ ಸಂಘದ ಕೋಣೆಯಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದರು. ಕೇಂದ್ರ ವಿಭಾಗದ ಡಿಸಿಪಿ ಜಿ ರಮೇಶ್ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಭಟ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಆದರೆ, ಪಟ್ಟು ಬಿಡದ ವಕೀಲರು ಸಬ್ ಇನ್ಸ್ ಪೆಕ್ಟರ್ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಘಟನೆ ವಿವರ
ಜೆಪಿ ನಗರ 6ನೇ ಹಂತ, 25ನೇ ಕ್ರಾಸ್ ನಿವಾಸಿ ಶ್ರೀನಿವಾಸ್ ರಾವ್ ಎಂಬುವವರ ಮನೆಗೆ ಮೇ 7 ರಂದು ಬಂದ ವಕೀಲ ಸಂತೋಷ್, ಪ್ರಾಣ ಬೆದರಿಕೆ ಹಾಕಿದ್ದರು. ಸಾಲದ್ದಕ್ಕೆ ರಾಯರ ಇಬ್ಬರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಶ್ರೀನಿವಾಸ್ ರಾವ್ ಅವರ ಪಕ್ಕದ ಮನೆಯಲ್ಲಿರುವ ಮಹಿಳೆಯರ ಜೊತೆ ಸಂತೋಷ್ ಹೊಂದಿದ್ದ ಸಂಬಂಧ ಕೆಲ ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಇದಕ್ಕೆ ಶ್ರೀನಿವಾಸ್ ರಾವ್ ಕಾರಣ ಎಂದು ಸಂತೋಷ್ ಬೆದರಿಕೆ ಹಾಕಿದ್ದರು ಎಂದು ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications