ಸಿಬಿಐ ಕಾರ್ಯವೈಖರಿಗೆ ಅಡ್ವಾಣಿ ತೀವ್ರ ಆಕ್ಷೇಪ
ಗಾಂಧಿನಗರ, ಏ, 28 : ಬೋಫೋರ್ಸ್ ಫಿರಂಗಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಮೂಲದ ಉದ್ಯಮಿದಾರ ಒಟ್ಟಾವಿಯೋ ಕ್ವಟ್ರೋಚಿ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿರುವುದಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಲ್ ಕೆ ಅಡ್ವಾಣಿ, ಸ್ವತಂತ್ರ ಭಾರತ ಬಹುದೊಡ್ಡ ಹಗರಣ ಇದಾಗಿದ್ದು, ಕ್ಲೀನ್ ಚಿಟ್ ನೀಡಿರುವ ಸಿಬಿಐ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧಿನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಡ್ವಾಣಿ, ಸಿಬಿಐ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರ ಹಿಡಿದ ನಂತರ ಸಿಬಿಐ ಕಾರ್ಯವೈಖರಿ ತುಂಬ ಅನುಮಾನ ರೀತಿಯಲ್ಲಿ ನಡೆದುಕೊಂಡು ಬಂದಿದೆ. ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಸಿಬಿಐನ ಕಳೆದ ಐದು ವರ್ಷಗಳ ಕಾರ್ಯವೈಖರಿಯನ್ನು ತನಿಖೆ ನಡೆಸಬೇಕಾದ ಅಗತ್ಯವಿದೆ ಅಡ್ವಾಣಿ ಹೇಳಿದರು.
ಬೋಫೋರ್ಸ್ ಹಗರಣದಿಂದ ಮುಖ್ಯ ಆರೋಪಿ ಕ್ವಟ್ರೋಚಿ ಅವರ ಹೆಸರನ್ನು ಕೈಬಿಟ್ಟಿರುವುದು ದೇಶಕ್ಕೆ ಮಾಡಿದ ಅವಮಾನ. 1997ರಲ್ಲಿಯೇ ಕ್ವಟ್ರೋಚಿ ಅರೋಪಿ ಎಂದು ಅವರನ್ನು ಬಂಧಿಸಲಾಗಿದೆ. ಆದರೂ ಕೂಡಾ ಸಿಬಿಐ ಕೇಂದ್ರ ಸರಕಾರ ಒತ್ತಡಕ್ಕೆ ಮಣಿದು ಕ್ವಟ್ರೋಚಿ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಆರೋಪಿಸಿದರು. 1980ರ ದಶಕದಲ್ಲಿ ಬೋಫೋರ್ಸ್ ಹಗರಣ ಬೆಳಕಿಗೆ ಬಂದಿತು. 155 ಬಿಲಿಯನ್ ಹಣದ ಹಗರಣವಾಗಿದ್ದು, ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಹಾಗೂ ದೇಶದ ಪ್ರಮುಖ ರಾಜಕಾರಣಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬೋಫೋರ್ಸ್ ಹಗರಣ: ಕ್ವಟ್ರೋಚಿ ಆರೋಪ ಮುಕ್ತ