ಅಕ್ಷಯ ತೃತೀಯದ ಮೇಲೆ ಆಯೋಗದ ಕಣ್ಣು!
ಮೈಸೂರು, ಏ. 26: ಜಿಲ್ಲೆಯ ಎಲ್ಲಾ ಚಿನ್ನ ಬೆಳ್ಳಿ ವ್ಯಾಪಾರಸ್ಥರು ಅಕ್ಷಯ ತೃತೀಯ ಸಂದರ್ಭದ 25, 26 ಮತ್ತು 27 ರ ಏಪ್ರಿಲ್ 2009ರಂದು ತಾವು ನಡೆಸುವ ಎಲ್ಲಾ ವ್ಯವಹಾರಗಳನ್ನು ಪಾರದರ್ಶಕವಾಗಿ ನಡೆಸಲು ಹಾಗೂ ಈ ಬಗ್ಗೆ ಮಾರಾಟಗಾರರು ವಾಣಿಜ್ಯ ತೆರಿಗೆ ಇಲಾಖೆಗೆ ಪುನರ್ ಪರಿಶೀಲನೆಗೆ ಮೂರು ದಿನಗಳ ಮಾರಾಟ ರಿಟರ್ನ್ಸ್ ಬಗ್ಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಮಣಿವಣ್ಣನ್ ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖಾಧಿಕಾರಿಗಳು ಹಾಗೂ ಸೆಕ್ಟರಲ್ ಮ್ಯಾಜಿಸ್ಟ್ರೇಟರ್ಗಳು ಯಾವುದೇ ಅಂಗಡಿಯನ್ನು ಮತ್ತು ಲೆಕ್ಕಪತ್ರಗಳನ್ನು ತಪಾಸಣೆ ಮಾಡಲು ಅಧಿಕಾರ ಹೊಂದಿರುತ್ತಾರೆ. ಒಂದು ವೇಳೆ ವ್ಯಾಪಾರ ವಹಿವಾಟಿನಲ್ಲಿ ಏನಾದರೂ ಲೋಪ ಕಂಡುಬಂದಲ್ಲಿ ಅಂತಹ ಅಂಗಡಿಯಲ್ಲಿ ಚಿನ್ನ ಬೆಳ್ಳಿ ವ್ಯಾಪಾರವನ್ನು ಸ್ಥಗಿತಗೊಳಿಸಲು ಸಹ ಅವರಿಗೆ ಅಧಿಕಾರ ನೀಡಲಾಗಿದೆ.
ಇದಲ್ಲದೆ ಚಿನ್ನ ಬೆಳ್ಳಿ ಅಂಗಡಿಗಳ ವ್ಯಾಪಾರಸ್ಥರು ತಮ್ಮಲ್ಲಿಗೆ ಬರುವ ಗ್ರಾಹಕರ ಹೆಸರು ಹಾಗೂ ಸಂಪರ್ಕಿಸಲು ದೂರವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ಸಂಗ್ರಹಿಸಲು ಸೂಚಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications