ಬಳ್ಳಾರಿ ರೆಡ್ಡಿ ಸಹೋದರರ ಗಣಿ ಗುತ್ತಿಗೆ ಅಮಾನತು

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಡಿಎಫ್ ಓ ಅವರ ಸಹಕಾರದಿಂದ ಅರಣ್ಯ ಸಂರಕ್ಷಣಾ ಕಾಯ್ದೆ, ಗಣಿ ಕಂಪನಿಗಳ ಸುರಕ್ಷಾ ವಲಯ ನಿಯಮ ಮತ್ತು ಗಡಿ ಭಾಗಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಅಂತರರಾಜ್ಯದ ಗಡಿಭಾಗದಲ್ಲಿ ಆಂಧ್ರ ಸರ್ಕಾರವು ಓಬಳಾಪುರಂ ಮೈನಿಂಗ್ ಕಂಪನಿ (30.50 ಹೆಕ್ಟೇರ್ ಮತ್ತು 25.98 ಹೆಕ್ಟೇರ್), ಬಳ್ಳಾರಿ ಕಬ್ಬಿಣ ಅದಿರು ಕಂಪನಿ (27.12 ಹೆಕ್ಟೇರ್),ವೈ.ಮಹಾಬಲೇಶ್ವರಪ್ಪ ಅಂಡ್ ಸನ್ಸ್ (20.24 ಹೆಕ್ಟೇರ್) ಮತ್ತು ಅನಂತಪುರ ಮೈನಿಂಗ್ ಕಾರ್ಪೊರೇಷನ್ (6.5 ಹೆಕ್ಟೇರ್) ಕಂಪನಿಗಳ ಗುತ್ತಿಗೆಯನ್ನು ತಕ್ಷಣ ಅಮಾನತುಗೊಳಿಸಲು ಆದೇಶಿಸಲಾಗಿದೆ.
ಸಚಿವರ ಮಾಲೀಕತ್ವದ ಅಂತರರಾಜ್ಯ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟವಾಗಿ ತಿಳಿಯಲು ಭಾರತೀಯ ಸರ್ವೇ ಇಲಾಖೆಯಿಂದ ಸಮೀಕ್ಷೆ ನಡೆಯಬೇಕಿದೆ. ಗಡಿ ಗುರುತಿಸುವ ಪ್ರಕ್ರಿಯೆ ಅಂತ್ಯ ಗೊಳ್ಳುವವರೆಗೆ ಎಲ್ಲ ಐದು ಕಂಪನಿಗಳ ಗುತ್ತಿಗೆಗಳನ್ನು ಅಮಾನತಿನಲ್ಲಿ ಇಡಬೇಕು ಎಂದು ಕೇಂದ್ರ ಅರಣ್ಯ ಇಲಾಖೆ ಹಿರಿಯ ಸಹಾಯಕ ಐಜಿಪಿ ಬಿ.ಕೆ.ಸಿಂಗ್ ಬುಧವಾರ ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ಆದೇಶ ಹೊರಡಿಸಿದ 15 ದಿನಗಳ ಒಳಗಾಗಿ ತಮಗೆ ಕಾರ್ಯಪಾಲನಾ ವರದಿ ನೀಡಬೇಕು. ಸರಿಯಾಗಿ ಗಡಿಯನ್ನುಗುರುತಿಸದೇ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಬಿ.ಕೆ.ಸಿಂಗ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications