ಉಗ್ರ ಪ್ರಭಾಕರನ್ ಸಮುದ್ರದ ಮೂಲಕ ಪರಾರಿ
ಕಿಲಿನೊಚ್ಚಿ, ಏ. 24 : ಶ್ರೀಲಂಕಾ ಸರಕಾರ ಎಲ್ ಟಿಟಿಇ ಸರ್ವನಾಶಕ್ಕಾಗಿ ಸೇನಾಕಾರ್ಯಾಚರಣೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ತಮಿಳು ವ್ಯಾಘ್ರಗಳ ಮುಖಂಡ ವಿ ಪ್ರಭಾಕರನ್ ಸಮುದ್ರ ಮೂಲಕ ಪರಾರಿಯಾಗಿರುವ ಬಗ್ಗೆ ಲಂಕಾ ಸೇನಾಪಡೆ ಸಂಶಯ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಸೇನಾಪಡೆ ಬ್ರಿಗೇಡಿಯರ್ ಸರ್ವೇಂದ್ರ ಡಿಸಿಲ್ವಾ, ಎಲ್ ಟಿಟಿಇ ವಶದಲ್ಲಿದ್ದ ಬಹುಭಾಗವನ್ನು ನಾವು ಈಗಾಗಲೇ ವಶಪಡಿಸಿಕೊಂಡಿದ್ದೇವೆ. ಸಾವಿರಾರು ತಮಿಳರು ಸರಕಾರಿ ಸ್ವಾಧೀನದಲ್ಲಿರುವ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್, ಅವರ ಮಗ ಚಾರ್ಲ್ಸ್ ಅಂತೋನಿ, ಸಂಘಟನೆಯ ಗುಪ್ತಚರ ಇಲಾಖೆಯ ಮುಖ್ಯಸ್ಥ ಪೊಟ್ಟು ಅಮ್ಮನ್ ಹಾಗೂ ಸಂಘಟನೆಯ ನೌಕಾಪಡೆ ಮುಖ್ಯಸ್ಥ ಸೊಸೈ ಮಾತ್ರ ತಪ್ಪಿಸಿಕೊಂಡಿದ್ದಾರೆ. ಸಮುದ್ರದ ಮೂಲಕ ಪರಾರಿಯಾಗಿರಬಹುದು ಎಂಬ ಶಂಕಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ ಮಂಗಳವಾರ ಎಲ್ ಟಿಟಿಇ ವಕ್ತಾರ ದಯಾ ಮಾಸ್ಟರ್ ಮತ್ತಿತರ ಹಿರಿಯ ಸದಸ್ಯರನ್ನು ಶ್ರೀಲಂಕಾ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಉಗ್ರ ಸಂಘಟನೆಯನ್ನು ಶತಾಯಗತಾಯ ಬಗ್ಗು ಬಡಿಯಲೇಬೇಕು ಎಂದು ಪಣತೊಟ್ಟಿಂತಿರುವ ಲಂಕಾ ಸರಕಾರ ಕಳೆದ ನಾಲ್ಕು ದಿನಗಳಿಂದ ಸೇನಾ ಕಾರ್ಯಚರಣೆ ನಡೆಸತೊಡಗಿದೆ.
(ದಟ್ಸ್ ಕನ್ನಡ ವಾರ್ತೆ)