ಮಲಬಾರಿ ವಕೀಲನ ಹತ್ಯೆ : 6 ಮಂದಿ ಬಂಧನ
ಮಂಗಳೂರು, ಏ. 24 : ಭಯೋತ್ಪಾದಕ ಛೋಟಾ ಶಕೀಲ್ ಬಂಟ ರಶೀದ್ ಮಲಬಾರಿ ಪರ ವಕೀಲ ನೌಶಾದ್ ಕಾಶಿಂ ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಮಂಗಳೂರು ಅಪರಾಧಿ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇದೇ ತಿಂಗಳು 9 ರಂದು ನೌಶಾದ್ ಕಾಶಂ ಅವರನ್ನು ಅಪರಿಚಿತರು ಹತ್ಯೆಗೈದು ಪರಾರಿಯಾಗಿದ್ದರು.
ಮಂಗಳೂರು ಅಪರಾಧಿ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಿಂದೂ ಡಾನ್ ರವಿ ಪೂಜಾರಿ ಬೆಂಬಲಗರು ಎನ್ನಲಾದ ಆರು ಮಂದಿ ಆರೋಪಿಗಳನ್ನು ಮಂಗಳೂರು ಮತ್ತು ಬೆಳ್ತಂಗಡಿಯಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರು ಹೇಳಿದರು. ಬಂಧನವಾಗಿರುವ ಎಲ್ಲ ಆರು ಮಂದಿ ಆರೋಪಿಗಳನ್ನು ಶೀಘ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.
ರಶೀದ್ ಮಲಬಾರಿ ಪರ ನೌಶಾದ್ ಕಾಶಿಂ ವಾದ ಮಂಡಿಸಲು ಒಪ್ಪಿಕೊಂಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಡಾನ್ ರವಿ ಪೂಜಾರಿ, ತನ್ನ ಬೆಂಬಲಿಗರಿಗೆ ಸುಪಾರಿ ನೀಡಿ ವಕೀಲ ಕಾಶಿಂ ಅವರನ್ನು ಹತ್ಯೆ ಮಾಡಿದ್ದರು. ಈ ವಿಷಯವನ್ನು ರವಿ ಪೂಜಾರಿ ಅವರೇ ವಾಹಿನಿ ಮೂಲಕ ಒಪ್ಪಿಕೊಂಡಿದ್ದಾರೆ. ಕಾಶಿಂ ಅವರನ್ನು ಪೊಲೀಸರೇ ರೌಡಿಗಳಿಗೆ ಸುಪಾರಿ ಕೊಟ್ಟ ಹತ್ಯೆ ಮಾಡಿಸಿದ್ದಾರೆ ಎಂದು ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
(ದಟ್ಸ್ ಕನ್ನಡ ವಾರ್ತೆ)