ದಕದಲ್ಲಿ ಸ್ಪರ್ಧಿಸುತ್ತಿರುವ ಯುಕೆ ಹುಡುಗ ಕುಂಟಿಕಾನಮಠ

ಮತದಾರರು ತಮ್ಮ ಪ್ರತಿನಿಧಿ ಎಷ್ಟು ಸಮರ್ಥ ಎಂದು ಅರಿಯಲು ಇಂದು ಕಷ್ಟವಿಲ್ಲ. ಸುಮಾರು 40% ಮತದಾರರು ಮೊದಲ ಸಲದ ಮತ ಚಲಾಯಿಸುತ್ತಿದ್ದಾರೆ. ಅವರಲ್ಲಿ ಸುಸಂಸ್ಕೃತರು ಮತ್ತು ವಿದ್ಯಾವಂತರ ಸಂಖ್ಯೆಯೇ ಹೆಚ್ಚಿದೆ. ಇಂತವರನ್ನು ಗುರಿಯಾಗಿ ಇಟ್ಟುಕೊಂಡು ಪ್ರಚಾರ ಮಾಡುತಿರುವುದಾಗಿ ಕುಮಾರ್ ಕುಂಟಿಕಾನಮಠ ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
ಅನಿವಾಸಿ ಕನ್ನಡಿಗರು, ಭಾರತೀಯರು, ವಿಜ್ಞಾನಿಗಳು, ವೈದ್ಯರು, ಕಲಾವಿದರು, ಉದ್ಯೋಗಪತಿಗಳು ಬೆಂಬಲ ಸೂಚಿಸಿದ್ದಾರೆ. ಮುಖ್ಯವಾಗಿ ಕ್ಯಾಪ್ಟನ್ ಗೋಪಿನಾಥ್ , ಇನ್ಫೋಸಿಸ್ ಸಂಸ್ಥೆಯ ಮೋಹನದಾಸ್ ಪೈ ಮೊದಲಾದವರು ಬೆಂಬಲ ಸೂಚಿಸಿರುವುದಾಗಿ ಹೇಳಿದ್ದಾರೆ.
ಈಗಾಗಲೇ ಮಂಗಳೂರಿನ ಅಭಿವೃದ್ದಿಗಾಗಿ ಬಿಸಿನೆಸ್ ಪ್ಲಾನ್ ಮಾಡಿದ್ದು, ಯಕ್ಷಗಾನ ಕಲೆಯನ್ನು ಜಗಜ್ಜಾಹಿರ ಮಾಡುವಲ್ಲಿ ಕೆಲಸ ಮಾಡುವುದು ಮತ್ತು ದಕ್ಷಿಣ ಕನ್ನಡದ ಕೃಷಿಕರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣ ಮಾಡಲು ಕಾರ್ಯಕ್ರಮವನ್ನು ನಿಯೋಜಿಸಿರುವುದಾಗಿ ಕುಮಾರ್ ತಿಳಿಸಿದ್ದಾರೆ.
ಕುಂಟಿಕಾನಮಠ ಅವರು ಬೆಂಗಳೂರಿನವರಾದರೂ ಅವರ ಮೂಲ ಊರು ಕಾಸರಗೋಡು. ಯುನೈಟೆಡ್ ಕಿಂಗಡಮ್ ನಲ್ಲಿ ಕೆಎಮ್ ಕನ್ಸಲ್ಟನ್ಸಿ ಕಂಪನಿಯ ನಿರ್ದೇಶಕರಾಗಿರುವ ಕುಮಾರ್, ಕೋಮು ಗಲಭೆ ಮತ್ತು ಪಬ್ ದಾಳಿಗಳಿಂದ ಜರ್ಜರಿತವಾಗಿರುವ ಮಂಗಳೂರಿಗೆ ಬದಲಾವಣೆ ಬೇಕಾಗಿದೆ. ಬದಲಾವಣೆ ತರಲು ಶ್ರಮಿಸುವುದಾಗಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications