ಮತದಾನ : ನಕ್ಸಲರ ಅಟ್ಟಹಾಸಕ್ಕೆ 17 ಸಾವು
ಛತ್ತೀಸ್ ಗಢ್ ದ ರಾಜನಂದಗಾಂವ್ ಜಿಲ್ಲೆಯಲ್ಲಿ ಮತದಾನ ಕೇಂದ್ರಕ್ಕೆ ತೆರಳುತ್ತಿದ್ದ ಮತಗಟ್ಟೆ ಅಧಿಕಾರಿಗಳ ವಾಹನವನ್ನು ಸ್ಫೋಟಗೊಳಿಸಿದ್ದರಿಂದ 5 ಮಂದಿ ಮತಗಟ್ಟೆ ಅಧಿಕಾರಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಾಗೂ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ದಂಟೇವಾಡ ಮತ್ತು ನಾರಾಯಣ್ ಪುರ್ ಜಿಲ್ಲೆಗಳಲ್ಲಿನ ಮತಕೇಂದ್ರಗಳ ಮೇಲೆ ನಕ್ಸಲರು ದಾಳಿ ನಡೆಸಿ ಮತಯಂತ್ರ ಅಪಹರಣ ಮಾಡಲು ಯತ್ನಿಸಿದ್ದಾರೆ. ಕೆಲವಡೆ ಮತಯಂತ್ರ ಅಪಹರಣವಾಗಿರುವ ಘಟನೆಯೂ ನಡೆದಿದೆ. ಇನ್ನು ಕೆಲವಡೆ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದೆ.
ಜಾರ್ಖಂಡ್ ನ ಲಾಟೆಹಾರ್ ಜಿಲ್ಲೆಯಲ್ಲಿ ಮತದಾನ ಕೇಂದ್ರಕ್ಕೆ ತೆರಳುತ್ತಿದ್ದ ಬಿಎಸ್ಎಫ್ ಯೋಧರ ವಾಹನವನ್ನೇ ನಕ್ಸಲರು ಸ್ಫೋಟಿಸಿದ್ದರಿಂದ 5 ಮಂದಿ ಯೋಧರು ಸಾವನ್ನಪ್ಪಿದ್ದಾರೆ. ಬಿಹಾರ್ ಗಯಾ ಜಿಲ್ಲೆಯಲ್ಲಿ ಬಂಕೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಮತ್ತು ಹೋಮ್ ಗಾರ್ಡ್ಸ್ ಗಳ ಮೇಲೆ ದಾಳಿ ನಡೆಸಿರುವ ನಕ್ಸಲರು ಒಬ್ಬ ಪೊಲೀಸ್ ಪೇದೆ ಮತ್ತು ಒಬ್ಬ ಹೋಮ್ ಗಾರ್ಡ್ಸ್ ನನ್ನು ಹತ್ಯೆಗೈದಿದ್ದಾರೆ. ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಕಾಣಿಯಾಗಿದ್ದಾರೆ.
ನಕ್ಸಲ್ ಪೀಡಿತ ರಾಜ್ಯವಾಗಿರುವ ಒರಿಸ್ಸಾದ ಮಾಲ್ ಕರಂಜಿ ಜಿಲ್ಲೆಯಲ್ಲೂ ನಕ್ಸಲರು ದಾಳಿ ನಡೆಸಿದ್ದಾರೆ. ಕೆಲವಡೆ ಮತದಾನ ಬಹಿಷ್ಕರಿಸಲಾಗಿದೆ. ಚಿತ್ರಕೊಂಡ ಎಂಬಲ್ಲಿ ಚುನಾವಣೆ ಮತಕೇಂದ್ರ ಧ್ವಂಸ ಮಾಡಲಾಗಿದೆ. ಅಲ್ಲದೇ ಸರ್ಕಾರಿ ವಾಹನವನ್ನು ಸುಟ್ಟು ಭಸ್ಮ ಮಾಡಲಾಗಿದೆ. ಇನ್ನೂ ಕೆಲಕಡೆಗಳಲ್ಲಿ ರಸ್ತೆ ಪಕ್ಕದಲ್ಲಿನ ಮರಗಳನ್ನು ಉರುಳಿಸಿ ವಾಹನಗಳನ್ನು ಅಡ್ಡಗಟ್ಟಿ ಮತದಾನಕ್ಕೆ ಅಡ್ಡಿ ಮಾಡಿದ್ದಾರೆ. ಚಿತ್ರಕೊಂಡ ಮತ್ತು ಮಾಲ್ ಕರಂಜಿಯಲ್ಲಿ ಬಹುತೇಕ ಭಾಗಗಳಲ್ಲಿ ನಕ್ಸಲರ ಭಯದಿಂದ ಜನರು ಮತ ಹಾಕಲು ಬಂದಿಲ್ಲ. ಆಂದ್ರಪ್ರದೇಶದ ಕೆಲವಡೆ ಮತದಾನ ಬಹಿಷ್ಕರಿಸಿದ ಘಟನೆಗಳು ನಡೆದಿವೆ.
ಈ ಮಧ್ಯೆ ಪ್ರಥಮ ಹಂತದ ಚುನಾವಣೆಯಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ, ಮರಳಿ ಮನೋಹರ್ ಜೋಶಿ, ಯಶವಂತ್ ಸಿನ್ಹಾ, ಬಿ ದತ್ರಾತ್ರೇಯ, ದಿಲೀಪ್ ಸಿಂಗ್, ತೆಲಂಗಾಣ ರಾಷ್ಟ್ರೀಯ ಸಮಿತಿಯ ಕೆ ಚಂದ್ರಶೇಖರ್ ರಾವ್, ನಟಿ ವಿಜಯಶಾಂತಿ, ಕಾಂಗ್ರೆಸ್ ಪಕ್ಷದ ರೇಣುಕಾ ಚೌಧರಿ, ಎನ್ ಟಿ ಆರ್ ಪುತ್ರಿ ಪುರಂದರೇಶ್ವರಿ, ಎಸ್ ಜೈಪಾಲ್ ರೆಡ್ಡಿ, ಶಶಿ ತರೂರ್, ರೇಣು ಜೋಗಿ, ಮೀರಾ ಕುಮಾರ್, ಸಂತೋಷ್ ಮೋಹನ್ ದೇವ್, ವಿಲಾಸ್ ಮುತ್ತೆಮ್ ವಾರ್ ಹಾಗೂ ಎನ್ ಸಿಪಿ ಪ್ರಫುಲ್ ಪಟೇಲ್ ಹಾಗೂ ಅಗಾಥಾ ಸಗ್ಮಾ ಅವರ ಭವಿಷ್ಯ ಈ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.
(ದಟ್ಸ್ ಕನ್ನಡ ವಾರ್ತೆ)