ಚಿದು ಮೇಲೆ ಬೂಟು ದಾಳಿ, ಬಿಜೆಪಿ ಖಂಡನೆ
ನವದೆಹಲಿ. ಏ. 7 : ಸೋಮವಾರ ಅಸ್ಸಾಂನಲ್ಲಿ ನಡೆದ ಉಲ್ಫಾ ಉಗ್ರರ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಪತ್ರಿಕಾಗೋಷ್ಠಿ ಕರೆದಿದ್ದರು. ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ದೈನಿಕ ಜಾಗರಣ ಪತ್ರಿಕೆಯ ಹಿರಿಯ ಪತ್ರಕರ್ತ ಜರ್ನೈಲ್ ಸಿಂಗ್ ಅವರು ಸಿಖ್ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಜಗದೀಶ ಟೈಟ್ಲರ್ ಅವರಿಗೆ ಸಿಬಿಐ ಪೊಲೀಸರು ಕ್ಲಿನ್ ಚಿಟ್ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸರಿಯಾಗಿ ಸ್ಪಂದಿಸದ ಗೃಹ ಸಚಿವರ ವರ್ತನೆಗೆ ಆಕ್ರೋಶಗೊಂಡ ಪತ್ರಕರ್ತ ಅವರ ಮೇಲೆ ಬೂಟು ಎಸೆದಿದ್ದಾನೆ. ಆದರೆ ಚಿದು ಏಟಿನಿಂದ ಸ್ಲಲ್ಪದರಲ್ಲೇ ಪಾರಾಗಿದ್ದಾರೆ. ಚಿದು ಜೊತೆಗೆ ಕರ್ನಾಟಕದ ಆಸ್ಕರ್ ಪರ್ನಾಂಡಿಸ್ ಇದ್ದರು.
ಗೃಹ ಸಚಿವರ ಮೇಲೆ ಪತ್ರಕರ್ತ ಜರ್ನೈಲ್ ಸಿಂಗ್ ಬೂಟು ಎಸೆದಿರುವ ಘಟನೆ ವಿಷಾದಕರ ಸಂಗತಿ. ಅನಾಗರಿಕ ವರ್ತನೆ, ಸಂವಿಧಾನ ವಿರೋಧಿ ಕೆಲಸ ಮಾಡುವ ಯಾರಿಗೂ ಬೆಂಬಲ ನೀಡುವ ಮಾತೇ ಇಲ್ಲ. ಇದೊಂದು ಖಂಡನೀಯ ಕೃತ್ಯ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಎಡಿಟರ್ ಗಿಲ್ಡ್ ಕೂಡಾ ಘಟನೆಗೆ ವಿಷಾದಿಸಿದೆ. ಪತ್ರಕರ್ತರು ತಮ್ಮ ಗಡಿಯನ್ನು ಮೀರಬಾರದು. ತಮ್ಮ ಕರ್ತವ್ಯವನ್ನು ಗಮನದಲ್ಲಿರಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ಸಂಪಾದಕ ವಿನೋದ ಶರ್ಮಾ ಸಲಹೆ ನೀಡಿದ್ದಾರೆ. ಆದರೆ, ಸಚಿವರ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೂಟು ಎಸೆತವನ್ನು ಸಮರ್ಥಿಸಿಕೊಂಡಿರುವ ಪತ್ರಕರ್ತ ಜರ್ನೈಲ್ ಸಿಂಗ್, ನಾನು ಮಾಡಿದ ಕೆಲಸ ಸರಿಯಾಗಿದೆ ಎಂದಿದ್ದಾರೆ. 1984ರಲ್ಲಿ ಸುಮಾರು 3500 ಸಿಖ್ ಮಾರಣಹೋಮಕ್ಕೆ ಕಾರಣನಾದ ವ್ಯಕ್ತಿ ಪರ ಕೇಂದ್ರದ ಯುಪಿಎ ಸರ್ಕಾರ ಬೆಂಬಲ ನೀಡಿದೆ. ಈ ಕಾರಣಕ್ಕಾಗಿ ಸಿಬಿಐ ಪೊಲೀಸರು ಜಗದೀಶ್ ಟೈಟ್ಲರ್ ಅವರಿಗೆ ಕ್ಲಿನ್ ಚಿಟ್ ನೀಡಿದ್ದಾರೆ. ಇದರಿಂದ ಸಿಖ್ ಸಮುದಾಯಕ್ಕೆ ಭಾರಿ ಅಘಾತವಾಗಿದೆ. ನನ್ನ ಜನಾಂಗದ ಆಕ್ರೋಶವನ್ನು ನಾನು ತೋರಿಸಿರುವೆ ಎಂದು ಜರ್ನೈಲ್ ಸಿಂಗ್ ಸಮರ್ಥಿಸಿಕೊಂಡಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ: ಗೃಹ ಸಚಿವ ಚಿದಂಬರಂ ಮೇಲೆ ಶೂ ಎಸೆತ












Click it and Unblock the Notifications