ಜೈಟ್ಲಿ-ರಾಜನಾಥ್ ವಿರಸ ಅಂತ್ಯಕ್ಕೆ ಅರ್ಎಸ್ಎಸ್
ನವದೆಹಲಿ, ಮಾ. 16 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲೆ ನಡುವಣ ವಿರಸಕ್ಕೆ ಮಂಗಳ ಹಾಡಲು ಆರ್ಎಸ್ಎಸ್ ಮುಂದಾಗಿದೆ. ರಾಷ್ಟ್ರೀಯ ಸ್ವಯಂಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಅವರು ಜೇಟ್ಲೆ ಅವರನ್ನು ತಮ್ಮ ನಿವಾಸಕ್ಕೆ ಕರೆಸಿ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಸುಧಾಂಶು ಮಿತ್ತಲ್ ಅವರನ್ನು ಈಶಾನ್ಯ ಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಜೈಟ್ಲಿ ಮುನಿಸಿಗೆ ಕಾರಣವಾಗಿದೆ. ಸುಧಾಂಶು ಅವರನ್ನು ಕೂಡಲೇ ಆ ಪದವಿಯಿಂದ ಬಿಡುಗಡೆಗೊಳಿಸಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಅವರನ್ನು ಪದವಿಯಿಂದ ಕೆಳಗಿಸುವವರೆಗೂ ಪಕ್ಷದ ಚುನಾವಣಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಜೈಟ್ಲಿ ಖಡಾಖಂಡಿತವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಸಮೀಪ ಇರುವ ಈ ಮಹತ್ವದ ಗಳಿಗೆಯಲ್ಲಿ ನಾಯಕರ ವಿರಸ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಈ ಇಬ್ಬರು ನಾಯಕ ಮಧ್ಯೆ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಪ್ರಯತ್ನ ನಡೆಸಿದ್ದಾರೆ.
ನಾಳೆ ನಡೆಯುವ ಮುಖ್ಯ ಚುನಾವಣ ಆಯುಕ್ತರ ಜೊತೆಗಿನ ಪಕ್ಷದ ಮಹತ್ವದ ಮಾತುಕತೆಯ ಮುಂಚೆ ಈ ಇಬ್ಬರೂ ನಾಯಕರ ನಡುವಣ ವಿರಸಕ್ಕೆ ಮಂಗಳ ಹಾಡಬೇಕೆಂದು ಆರ್ ಎಸ್ ಎಸ್ ಹರಸಾಹಸ ನಡೆಸಿದೆ.
(ದಟ್ಸ್ ಕನ್ನಡ ವಾರ್ತೆ)
ರಾಜನಾಥ್ ವಿರುದ್ಧ ಜೈಟ್ಲಿ ಮುನಿಸು, ಸಭೆಗೆ ಗೈರು
ಬಿಜೆಪಿ-ಶಿವಸೇನೆ ಬಿಕ್ಕಟ್ಟು ಶಮನ
ಬಿಜೆಪಿ ತ್ರಿಮೂರ್ತಿಗಳಿಂದ ಒಗ್ಗಟ್ಟು ಪ್ರದರ್ಶನ











Click it and Unblock the Notifications