ಆಯನೂರು ಎಷ್ಟು ತಗೊಂಡ್ರು ಅಂತ ಗೊತ್ತು:ಯತ್ನಾಳ್
ಬೆಂಗಳೂರು, ಮಾ.14: ಆಯನೂರು ಮಂಜುನಾಥ್ ಬೇರೆ ಪಕ್ಷಕ್ಕೆ ಸೇರಿದಾಗ ಎಷ್ಟೆಷ್ಟು ದುಡ್ಡು ತೆಗೆದುಕೊಂಡರು ಎಂದು ಎಲ್ಲರಿಗೂ ಗೊತ್ತಿದೆ. ಅಂತಹವರಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದು ಸಂಸದ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ವಿಶ್ವಾಸಮತದ ಸಮಯದಲ್ಲಿ ಬಿಜೆಪಿ ಮುಖಂಡರನ್ನು ಬ್ಲಾಕ್ ಮೇಲ್ ಮಾಡಿ ರು.2 ಕೋಟಿ ಪಡೆದ ಬಗ್ಗೆ ಸುಳ್ಳು ಸುದ್ದಿಗಳು ಹಬ್ಬಿವೆ, ಈ ಕುರಿತು ಯತ್ನಾಳ್ ವಿವರಣೆ ನೀಡಬೇಕು ಎಂದು ಮಾಜಿ ಲೋಕಸಭಾ ಸದಸ್ಯ ಆಯನೂರು ಮಂಜುನಾಥ್ ಒತ್ತಾಯಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ತಾಕತ್ತಿದ್ದರೆ ಮಂಜುನಾಥ್ ಅವರೇ ವಿವರಗಳನ್ನು ಬಹಿರಂಗಪಡಿಸಲಿ ಎಂದು ತಿರುಗೇಟು ನೀಡಿದ್ದಾರೆ.
ನಾನು ದುಡ್ಡು ಮಾಡುವಂತಿದ್ದರೆ ಯುಪಿಎ ಪರವಾಗಿ ಮತ ಹಾಕಿ ದುಡ್ಡು ಮಾಡಬಹುದಿತ್ತು. ಮಂಜುನಾಥ್ ಗೆ ಬಂದಿರುವ ಸ್ಥಿತಿ ನನಗೆ ಬಂದಿಲ್ಲ. ಈ ರೀತಿ ವದಂತಿಗಳನ್ನು ಹಬ್ಬಿಸುವ ಬದಲು ನಿಜ ಬಹಿರಂಗಪಡಿಸಲಿ ಎಂದಿದ್ದಾರೆ. ನನ್ನೊಂದಿಗೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ ಅವರು ಇದುವರೆಗೂ ನನ್ನನ್ನು ಸಂಪರ್ಕಿಸಿಲ್ಲ. ನನ್ನನ್ನು ಸಂಪರ್ಕಿಸುವ ನೈತಿಕ ಧೈರ್ಯ ಅವರಿಗಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications