ಎಂಇಎಸ್ ಶಾಸಕರಿಗೆ ವಿಧಾನಸೌಧ ಪ್ರವೇಶವಿಲ್ಲ, ಕರವೇ
ಬೆಳಗಾವಿ, ಫೆ. 26 : ಮಹಾರಾಷ್ಟ್ರ ರಾಜಕಾರಣಿಗಳು ಉಗ್ರರಿಗಿಂತಲೂ ಅಪಾಯಕಾರಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಆರೋಪಿಸಿದ್ದಾರೆ. ಪದೆಪದೇ ಬೆಳಗಾವಿ ಗಡಿಗೆ ಸಂಬಂಧಿಸಿದಂತೆ ತಗಾದೆ ತೆಗೆಯುತ್ತಿರುವ ನಾಡದ್ರೋಹಿ ಎಂಇಎಸ್ ಶಾಸಕದ್ವಯರಿಗೆ ಕರ್ನಾಟಕ ವಿಧಾನಸೌಧದ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕೊಲ್ಲಾಪುರ ಭವ್ಯ ಸೀಮಾ ಪರಿಷದ್ ನಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಛಗನ್ ಭುಜಬಲ ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ವಿಷಯಕ್ಕೆ ಬರಬೇಡಿ ಎಂದು ಮಹಾರಾಷ್ಟ್ರದ ರಾಜಕಾರಣಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಕೂಡ, ಗಡಿ ಭಾಗದ ಜನರ ಭಾವನೆಗಳನ್ನು ಪ್ರಚೋದಿಸುವ ಕೆಲಸವನ್ನು ಮಹಾರಾಷ್ಟ್ರ ಏಕೀಕರಣ ಮುಖಂಡರು ಶಾಸಕರು ಮುಂದುವರೆಸಿದ್ದಾರೆ ಎಂದು ಕಿಡಿಕಾರಿದರು.
ಮಾರ್ಚ್ 13 ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಸದ್ಯ ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಕೈಯಲ್ಲಿ ಇದೆ. ಆದರೆ, ಎಂಇಎಸ್ ಶಾಸಕರು ಪಾಲಿಕೆಯನ್ನು ಮರಾಠಿಗರ ತೆಕ್ಕೆಗೆ ತೆಗೆದುಕೊಳ್ಳಲು ಅನೇಕ ಸಂಚು ರೂಪಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಕೃತ್ಯವನ್ನು ಕನ್ನಡಿಗರು ಸಹಿಸುವುದಿಲ್ಲ. ಎಂಇಎಸ್ ಶಾಸಕರು ಇದೇ ರೀತಿ ಪುಂಡಾಟಿಕೆ ಮುಂದುವರೆಸಿದರೆ ಕರ್ನಾಟಕ ರಕ್ಷಣಾ ವೇದಿಕೆ ತಕ್ಕ ಪಾಠ ಕಲಿಸಲಿದೆ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದರು.
ಬೆಳಗಾವಿ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಮಾರ್ಚ್ 26 ಮತ್ತು 27 ರಂದು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾಹಿತಿಗಳು, ನಾಡಿನ ಮಠಾಧೀಶರು ಒಳಗೊಂಡ ನಿಯೋಗ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಶೀಘ್ರದಲ್ಲಿ ಇತ್ಯರ್ಥಪಡಿಸುವಂತೆ ಒತ್ತಾಯಿಸುವುದಾಗಿ ನಾರಾಯಣಗೌಡ ಹೇಳಿದರು. ಇತ್ತೀಚೆಗೆ ಕೊಲ್ಲಾಪುರದಲ್ಲಿ ನಡೆದ ಸೀಮಾ ಪರಿಷದ್ ನಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಛಗನ್ ಭುಜಬಲ ಅವರು, ಗಡಿ ಭಾಗದ ಮರಾಠಿಗರಿಗೆ ಅನ್ಯಾಯವಾದರೆ ರಕ್ತ ಹರಿಸಲೂ ಸಿದ್ಧ ಎಂದು ಹೇಳಿಕೆ ನೀಡಿದ್ದರು.
(ದಟ್ಸ್
ಕನ್ನಡ
ವಾರ್ತೆ)
ಬೆಳಗಾವಿ
ವಿವಾದ,
ಮಹಾರಾಷ್ಟ್ರ
ನಿಯೋಗಕ್ಕೆ
ಛೀಮಾರಿ