ಬೆಳಗಾವಿ ವಿವಾದ, ಮಹಾರಾಷ್ಟ್ರ ನಿಯೋಗಕ್ಕೆ ಛೀಮಾರಿ
ಬೆಳಗಾವಿ, ಫೆ. 23 : ಬೆಳಗಾವಿ ಗಡಿ ವಿವಾದ ಸಂಬಂಧ ಉನ್ನತ ನಿಯೋಗವನ್ನು ಕರೆದುಕೊಂಡು ದಿಲ್ಲಿಗೆ ತೆರಳಿದ್ದ ಮಹಾರಾಷ್ಟ್ರ ನಿಯೋಗಕ್ಕೆ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ತಮ್ಮ ಅನುಭವದ ಮಾತಿನಿಂದಲೇ ಕಪಾಳಮೋಕ್ಷ ಮಾಡಿ ನಿಯೋಗದ ನಾಯಕರಿಗೆ ಕಹಿ ಅನುಭವ ನೀಡಿದ್ದಾರೆ.
ಕರ್ನಾಟಕದಲ್ಲಿ ಮರಾಠಿ ಭಾಷಿಗರ ಮೇಲೆ ಅಲ್ಲಿನ ಸರ್ಕಾರ ದೌರ್ಜನ್ಯ ನಡೆಸುತ್ತಿದೆ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎ೦ದು ಘೋಷಿಸಬೇಕು ಎನ್ನುವ ಬೇಡಿಕೆಯೊಂದಿಗೆ ತೆರಳಿದ್ದ ನಿಯೋಗ, ಗೃಹ ಸಚಿವರಿಗೆ ಮನವಿ ಸಲ್ಲಿಸಿತ್ತು. ಮನವಿಗೆ ಸ್ಪಂದಿಸದ ಚಿದಂಬರಂ, ನೀವು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಬೇಡಿಕೆಯಿಟ್ಟರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಬೆಳಗಾವಿಯನ್ನು ಚಳಿಗಾಲದ ರಾಜಧಾನಿಯನ್ನಾಗಿ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಇತ್ತೀಚೆಗಷ್ಟೇ ಅಲ್ಲಿ ರಾಜ್ಯ ಅಧಿವೇಶನ ಬೇರೆ ನಡೆದಿದೆ. ಭಾರತ ಒಂದೇ ದೇಶ, ಕರ್ನಾಟಕ ಶತ್ರು ರಾಜ್ಯವಲ್ಲ, ಬೆಳಗಾವಿ ಕರ್ನಾಟಕದ ಒಂದು ಅವಿಭಾಜ್ಯ ಅಂಗ ಎ೦ದು ದಬಾಯಿಸಿ ವಾಪಸ್ಸು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ನಿಯೋಗದಲ್ಲಿ ಮುಖ್ಯಮಂತ್ರಿ ಅಶೋಕ್ ಚವಾಣ್, ಉಪಮುಖ್ಯಮಂತ್ರಿ ಛಗನ್ ಭುಜಬಲ್, ವಿರೋಧ ಪಕ್ಷದ ನಾಯಕ ರಾಮದಾಸ್ ಕದಂ ಮುಂತಾದವರಿದ್ದರು. ಗೃಹ ಸಚಿವರ ತಿರುಗೇಟು ಇನ್ನು ಮುಂದೆ ಮಹಾರಾಷ್ಟ್ರ, ಬೆಳಗಾವಿ ಗಡಿವಿವಾದದ ವಿಷಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ೦ತಾಗಿದ್ದು ಮಾತ್ರ ಸತ್ಯ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications