ಚೆನ್ನೈನಲ್ಲಿ ಮುಂದುವರಿದ ವಕೀಲರ ಪುಂಡಾಟಿಕೆ
ಚೆನ್ನೈ, ಫೆ.21: ಚೆನ್ನ್ನೈನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಕೀಲರ ಮತ್ತು ಪೊಲೀಸರ ನಡುವಿನ ಘರ್ಷಣೆ ಶುಕ್ರವಾರ ರಾತ್ರಿಯಿಂದ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಶಾಂತಿ ಕದಡುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ತಮಿಳುನಾಡು ಸರಕಾರ ಆದೇಶಿಸಿದೆ.
ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂಸ್ವಾಮಿ ಬಂಧನಕ್ಕೆ ಆಗ್ರಹಿಸಿ ವಕೀಲರ ಪ್ರತಿಭಟನೆ ಹಿಂಸಾಸ್ವರೂಪ ತಾಳಿದ್ದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಭಾರಿ ನಷ್ಟ ಉಂಟಾಗಿದೆ . ಮುಖ್ಯಮಂತ್ರಿ ಕರುಣಾನಿಧಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತುರ್ತು ಸಭೆ ನಡೆಸಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದಾರೆ. ಕಾನೂನು ಬಾಹಿರವಾಗಿ ಯಾರಾದರೂ ನಡೆದುಕೊಂಡರೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಘಟನೆ ಹಿನ್ನಲೆ: ಫೆಬ್ರವರಿ 17 ರಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಅವರು ಚಿದಂಬರಂ ದೇವಾಲಯದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೇವಾಲಯದ ಅರ್ಚಕರ ಪರ ವಾದ ಮಂಡಿಸಲು ಮದರಾಸು ಹೈಕೋರ್ಟ್ ಗೆ ಬಂದಿದ್ದರು.ವಕೀಲರು ಕೆಲವು ದಿನಗಳಿಂದ ನ್ಯಾಯಾಲಯದ ಕಲಾಪಗಳನ್ನು ಬಹಿಸ್ಕರಿಸುತ್ತಾ ಬಂದಿದ್ದರು. ಅಂದು ತಮಿಳು ವ್ಯಾಘ್ರ ಸಂಘಟನೆ ಎಲ್ಟಿಟಿಇ ಪರ ಘೋಷಣೆ ಕೂಗುತ್ತಾ ಬಂದ ಸುಮಾರು 50-60 ವಕೀಲರು ನ್ಯಾಯಾಲಯದ ಬಾಗಿಲ ಚಿಲಕ ಹಾಕಿ ಸ್ವಾಮಿ ಮೇಲೆ ಮೊಟ್ಟೆ ಎಸೆದು ನ್ಯಾಯಾಧೀಶರ ಮುಂದೆ ಎಳೆದಾಡಿ ಹಲ್ಲೆ ನಡೆಸಿದರು.
ಮರುದಿನ ಸ್ವಾಮಿ ಅವರು ವಕೀಲರ ವಿರುದ್ಧ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಿದರು. ಇದಕ್ಕೆ ವಿರುದ್ಧವಾಗಿ ವಕೀಲರು ಸ್ವಾಮಿ ಅವರ ವಿರುದ್ಧ ಹೈಕೋರ್ಟ್ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಗಲಭೆ ನಿರತ ವಕೀಲರನ್ನು ಬಂಧಿಸಲು ಮುಂದಾದರು. ಸ್ವಾಮಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದೆ ತಮ್ಮ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಲು ಬಂದ ಪೊಲೀಸರ ವಿರುದ್ಧ ತಿರುಗಿ ಬಿದ್ದ ವಕೀಲರು ಹಿಂಸಾಚಾರಕ್ಕೆ ಇಳಿದರು.
(ಏಜೆನ್ಸೀಸ್)











Click it and Unblock the Notifications