ನನ್ನ ವಿರುದ್ದ ಕೇಸು, ರಾಜಕೀಯ ಸಂಚು, ರೇಣುಕಾ ಚೌಧರಿ
ನವದೆಹಲಿ, ಫೆ. 17 : ಮಂಗಳೂರು ಪಬ್ ದಾಳಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳತೊಡಗಿದೆ. ಮಂಗಳೂರು ಮೇಯರ್ ಕ್ರಿಮಿನಲ್ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ರೇಣುಕಾ ಚೌಧರಿ, ತಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಅವರು ಕಿಡಿಕಾರಿದ್ದಾರೆ.
ಸಂಸತ್ತಿನ ಆವರಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರ ಗಮನವನ್ನು ಬೇರೆಡೆ ಸೆಳೆಯಲು ಭಾರಿ ತಂತ್ರ ರೂಪಿಸಿ ನನ್ನ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದರು. ಪಬ್ ದಾಳಿ ಪ್ರಕರಣದಲ್ಲಿ ಯುವತಿಯರನ್ನು ಹೀನಾಯವಾಗಿ ನಡೆಸಿಕೊಂಡಿರುವುದು ಸ್ಪಷ್ಟ. ಇದನ್ನು ಪ್ರಶ್ನಿಸಿದ ನನಗೆ ಅಲ್ಲಿನ ಸರ್ಕಾರ ನನ್ನ ವಿರುದ್ಧ ಕೇಸು ದಾಖಲಿಸುವಂತೆ ಪ್ರೇರೆಪಿಸಿದೆ ಎಂದು ಟೀಕಿಸಿದ ಅವರು, ಕೋಮು ಪ್ರಚೋದನಾಕಾರಿ ಹೇಳಿಕೆ ಎಂದು ಬಿಜೆಪಿ ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಚೌಧರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಘಟನೆಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಸ್ಪಷ್ಟಪಡಿಸಿದ ಚೌಧರಿ, ನನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾದರೂ ಯಾರೂ ಮಾತನಾಡದಿರುವುದು ದುರದೃಷ್ಟಕರ ಸಂಗತಿ ಎಂದು ಅವರು ಹೇಳಿದರು. ಮಂಗಳೂರು ಸಿಜೆಎಂ ನ್ಯಾಯಾಲಯದಲ್ಲಿ ಸಚಿವೆ ರೇಣುಕಾ ಚೌಧರಿ ವಿರುದ್ಧ ಮೇಯರ್ ಗಣೇಶ್ ಹೊಸಬೆಟ್ಟು ಹಾಗೂ ಮತ್ತಿತರರ ಪರವಾಗಿ ನ್ಯಾಯವಾದಿ ಪಿಪಿ ಹೆಗ್ಡೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಮಂಗಳೂರಿನಲ್ಲಿ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯನ್ನು ಮಾತನಾಡಿಸಿದರೆ ಹಲ್ಲೆ ನಡೆಸುತ್ತಾರೆ. ಹಾಗೂ ಮಂಗಳೂರು ತಾಲೀಬಾನಿಕರಣಗೊಂಡಿದೆ ಎಂಬ ಹೇಳಿಕೆಯನ್ನು ರೇಣುಕಾ ಚೌಧರಿ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪಬ್ ಸಂಸ್ಕೃತಿಗೆ ಅವಕಾಶ ನೀಡುವುದಿಲ್ಲ: ಸಿಎಂ











Click it and Unblock the Notifications