ನೈಸ್ ತನಿಖೆ ಲೋಕಾಯುಕ್ತಕ್ಕೆ: ಹೈಕೋರ್ಟ್
ಬೆಂಗಳೂರು, ಫೆ.2: ನೈಸ್ ರಸ್ತೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಸಮಗ್ರ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಸೋಮವಾರ ಲೋಕಾಯುಕ್ತಕ್ಕೆ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಮತ್ತು ವಿ.ಜೆ.ಸಭಾಹತ್ ಅವರನ್ನೊಳಗೊಂಡ ವಿಭಾಗೀಯ ಪೀಠ ದೇವೇಗೌಡರ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ ಈ ಆದೇಶ ನೀಡಿದೆ.
ಲೋಕಾಯುಕ್ತ ತನಿಖೆ ಮುಗಿಯುವವರೆಗೆ ಯೋಜನೆ ವಿಷಯಗಳನ್ನು ಹೊರತುಪಡಿಸಿ ಬೇರಾವುದೇ ವಿಷಯಗಳ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡಬಾರದು, ಮಾಧ್ಯಮಗಳ ಮುಂದೆ ಈ ವಿಷಯ ಚರ್ಚಿಸಬಾರದು ಹಾಗೂ ಯಾವುದೇ ಪತ್ರಗಳನ್ನು ಬರೆಯಬಾರದು ಎಂದು ನ್ಯಾಯಪೀಠ ಸೂಚಿಸಿದೆ. ನೈಸ್ ಸಂಸ್ಥೆ 30ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಗರಣ ಮಾಡಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಆರೋಪಿಸಿ ಪುಸ್ತಕವೊಂದನ್ನು ಸಿದ್ಧಪಡಿಸಿದ್ದರು. ಅದನ್ನು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಇತರ ನ್ಯಾಯಾಧೀಶರುಗಳಿಗೆ ಪ್ರತಿಗಳನ್ನು ಕಳುಹಿಸಿದ್ದರು.
ನ್ಯಾಯಾಲಕ್ಕೆ ಗೌಡರು ಕಳುಹಿಸಿದ್ದ ಪುಸ್ತಕಕ್ಕೆ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ಅಚ್ಚರಿ ವ್ಯಕ್ತಪಡಿಸಿ, ಈ ಬಗ್ಗೆ ಏನಾದರು ಹೇಳುವುದಿದ್ದರೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಹೇಳುವಂತೆ ನೋಟಿಸ್ ಜಾರಿ ಮಾಡಿದ್ದರು. ಪ್ರಕರಣವನ್ನು ಸ್ವಾಯತ್ತ ಸಂಸ್ಥೆಯೊಂದು ತನಿಖೆ ನಡೆಸಬೇಕು ಎಂದು ಕೋರ್ಟ್ ಅಭಿಪ್ರಾಯ ಪಟ್ಟು ನೈಸ್ ಹಗರಣವನ್ನು ತನಿಖೆ ನಡೆಸಲು ಲೋಕಾಯುಕ್ತರಿಗೆ ಒಪ್ಪಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಹೈಕೋರ್ಟ್ ಜಡ್ಜ್ ಗೆ ನೈಸ್ ಪುಸ್ತಕ ಕೊಟ್ಟ ಗೌಡ್ರು












Click it and Unblock the Notifications