ಉಗ್ರರನ್ನು ಹಸ್ತಾಂತರಿಸುವುದಿಲ್ಲ ; ಪಾಕ್
ಇಸ್ಲಾಮಾಬಾದ್, ಜ. 12 : ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿರುವ ಉಗ್ರರನ್ನು ಯಾವುದೇ ಕಾರಣಕ್ಕೂ ಭಾರತಕ್ಕೆ ಹಸ್ತಾಂತರಿಸುವ ಮಾತೇ ಇಲ್ಲ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ ಸಾರಾಸಗಟಾಗಿ ಭಾರತದ ಮನವಿಯನ್ನು ತಿರಸ್ಕರಿಸಿದ್ದಾರೆ. ಇಸ್ಲಾಮಾಬಾದ್ ಅಧಿಕೃತವಾಗಿ ನವದೆಹಲಿಯ ಬಹುದಿನದ ಬೇಡಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಅಂತಾರಾಷ್ಟ್ರೀಯ ಮಟ್ಟದಿಂದ ಭಾರತ ಎಷ್ಟೇ ಒತ್ತಡ ತಂದರೂ ಪ್ರಯೋಜನವಾಗದು ಎಂದು ಗಿಲಾನಿ ಖಂಡತುಂಡಾಗಿ ಮಾತನಾಡಿದ್ದಾರೆ.
ಭಾನುವಾರ ರಾತ್ರಿ ಇಸ್ಲಾಮಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಿಲಾನಿ, ಭಾರತದ ಒತ್ತಡಕ್ಕೆ ನಾವು ಮಣಿಯುವುದಿಲ್ಲ ಎಂದರು. ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿರುವ ಉಗ್ರರನ್ನು ಹಸ್ತಾಂತರಿಸುವುದಿಲ್ಲ. ಬದಲಾಗಿ ಪಾಕ್ ಕಾನೂನಿನ ಪ್ರಕಾರ ಅವರು ವಿರುದ್ಧ ತನಿಖೆ ನಡೆಸಿ ಶಿಕ್ಷೆ ನೀಡುವುದಾಗಿ ಅವರು ಹೇಳಿದರು. ಉಗ್ರರ ನಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಗಿಲಾನಿ, ಪಾಕ್ ನೆಲದಲ್ಲಿ ಭಯೋತ್ಪಾದನೆಯ ವಿಷ ಬೀಜ ಬೆಳೆಯಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಂಬೈ ಘಟನೆಯಲ್ಲಿ ಭಾಗಿಯಾಗಿ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರು ಸೇರಿದಂತೆ ಬಂಧಿತರಾಗಿರುವ ಉಗ್ರ ಮುಖಂಡರ ವಿಚಾರಣೆಯನ್ನು ಪಾಕ್ ನೆಲದಲ್ಲಿಯೇ ನಡೆಸಲಾಗುವುದು. ಪಾಕ್ ಕಾನೂನು ಉಳಿದೆಲ್ಲ ದೇಶಗಳ ಕಾನೂನಿಗಿಂತ ಬಲಿಷ್ಠ ಹಾಗೂ ಕಠಿಣವಾಗಿದೆ. ಆದ್ದರಿಂದ ಇಲ್ಲಿ ಸಿಕ್ಕಿಬಿದ್ದಿರುವ ಉಗ್ರರನ್ನು ನಾವೇ ಶಿಕ್ಷಿಸುತ್ತೇವೆ ಎಂದರು.
ಭಾರತದ ಮುಖಂಡರು ಪದೆಪದೇ ಉಗ್ರರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡುತ್ತಿರುವ ಬಗ್ಗೆ ತೀವ್ರ ಆಕ್ಷೇಪ ಮತ್ತು ಆಕ್ರೋಶ ವ್ಯಕ್ತಪಡಿಸಿದ ಗಿಲಾನಿ, ಪಾಕ್ ಸರ್ಕಾರ ತಾಳಿರುವ ನಿಲುವಿನಲ್ಲಿ ಯಾವುದೇ ಬದಲಾವಣಿ ಇಲ್ಲ ಎಂದು ಅವರು ಪುನರುಚ್ಚರಿಸಿದರು. ಭಾರತೀಯ ಮುಖಂಡರ ಹೇಳಿಕೆಗಳು ಗಡಿ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದೆ ಎಂದು ಅವರು ಆರೋಪಿಸಿದರು.
(ದಟ್ಸ್
ಕನ್ನಡ
ವಾರ್ತೆ)
ಕಸಬ್
ನಮ್ಮವನೇ
ಎಂದ
ಇಮ್ರಾನ್
ಖಾನ್