ಕಸಬ್ ನಮ್ಮವನೇ ಎಂದ ಇಮ್ರಾನ್ ಖಾನ್
ಇಸ್ಲಾಮಾಬಾದ್, ಜ. 9 : ಮುಂಬೈ ಭಯೋತ್ಪಾದನೆ ಪಾಕ್ ನಲೆದ ವ್ಯಕ್ತಿಗಳಿಂದ ನಡೆದ ಘಟನೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆಹಮೂದ್ ಅಲಿ ದುರಾನಿ ಒಪ್ಪಿಕೊಂಡ ಬೆನ್ನಲ್ಲೇ ಮಾಜಿ ಕ್ರಿಕೆಟ್ ಆಟಗಾರ ಹಾಗೂ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಕೂಡ ಅದೇ ರಾಗ ಮುಂದುವರಿಸಿದ್ದಾರೆ.
ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನ ಮೂಲದ ವ್ಯಕ್ತಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಮುಂಬೈ ಘಟನೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಬೇಕು ಎನ್ನುವ ನವದೆಹಲಿಯ ಒತ್ತಾಯಕ್ಕೆ ಇದರಿಂದ ಮತ್ತಷ್ಟು ಶಕ್ತಿ ಬಂದಂತಾಗಿರುವುದು ಸುಳ್ಳಲ್ಲ.
ಪಾಕಿಸ್ತಾನದ ವ್ಯಕ್ತಿಗಳು ಈ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದಿದೆ. ಈ ಘಟನೆ ಹೇಗೆ ನಡೆಯಿತು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ ಪಾಕ್ ಗೆ ಸಂಬಂಧಿಸಿದ ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎನ್ನಲು ಆಗದು ಎಂದು ಸಿಎನ್ಎನ್-ಐಬಿಎನ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಮುಂಬೈ ಘಟನೆ ಪಾಕಿಸ್ತಾನ ಸರ್ಕಾರ ನುಂಗಲಾರದ ತುತ್ತಾಗಿದೆ. ಪಾಕ್ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಹಾಗೂ ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ ನೇತೃತ್ವದ ಸರ್ಕಾರ ಭಾರಿ ಇಕ್ಕಟ್ಟಿಗೆ ಸಿಲುಕಿರುವುದಂತೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಖಾನ್ ವಿವರಿಸಿದರು. ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನದವನು ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆಹಮೂದ್ ಅಲಿ ದುರಾನಿ ಒಪ್ಪಿಕೊಂಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪಾಕ್ ಸರ್ಕಾರ ದುರಾನಿ ಅವರನ್ನು ತಕ್ಷಣ ಅಮಾನತು ಮಾಡಿತ್ತು.
ಇದರ ಜೊತೆಗೆ ಪಾಕ್ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಕೂಡ ಇದೇ ಹೇಳಿಕೆ ನೀಡಿ ನಂತರ ತಮ್ಮ ಮಾತು ಬದಲಿಸಿ ಕಸಬ್ ನಮ್ಮವನಲ್ಲ ಎಂಬರ್ಥ ಬರುವ ರೀತಿಯಲ್ಲಿ ಇನ್ನೊಂದು ಹೇಳಿಕೆ ನೀಡಿದ್ದರು. ಭಾರತ ಸರ್ಕಾರ ಕಸಬ್ ಪಾಕಿಸ್ತಾನದ ವ್ಯಕ್ತಿ ಎಂಬುದಕ್ಕೆ ಅನೇಕ ಸಾಕ್ಷ್ಯಾಧಾರಗಳನ್ನು ಈಗಾಗಲೇ ಪಾಕ್ ಸರ್ಕಾರಕ್ಕೆ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)
ಕಸಬ್: ಪಾಕಿಸ್ತಾನ ಒಪ್ಪಿಕೊಂಡ ಸತ್ಯಂ












Click it and Unblock the Notifications