ಭಾರತದ ಸಾಕ್ಷಿಯಲ್ಲಿ ದಮ್ಮಿಲ್ಲ ಎಂದ ಪಾಕ್
ಇಸ್ಲಾಮಾಬಾದ್, ಜ. 5 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ ಪತ್ರ ಹಾಗೂ ಆತನ ವಿಚಾರಣೆ ವೇಳೆ ನೀಡಿದ ಹೇಳಿಕೆಗಳನ್ನು ಸಾಕ್ಷಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಈ ಹೇಳಿಕೆಗಳನ್ನು ಸೂಕ್ತ ಸಾಕ್ಷ್ಯಾಧಾರಗಳು ಎಂದು ನಂಬಲು ಕಷ್ಟಸಾಧ್ಯ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ತಿಳಿಸಿದೆ ಎಂದು ಪಾಕ್ ಮೂಲದ ದಿ ನ್ಯೂಸ್ ಡೈಲಿ ಪತ್ರಿಕೆ ವರದಿ ಮಾಡಿದೆ.
ವಿಚಾರಣೆ ವೇಳೆಯಲ್ಲಿ ಆರೋಪಿ ನೀಡಿರುವ ಹೇಳಿಕೆಗಳು ಪೂರ್ವಗ್ರಹಗಳಿರಬಹುದು. ಅದನ್ನು ಸಾಕ್ಷಿಗಳು ಎಂದು ಪರಿಗಣಿಸಲು ಸಾಧ್ಯವೇ ಇಲ್ಲ. ಭಾರತದ ಬಳಿ ಇದಕ್ಕಿಂತ ಅಗತ್ಯ ದಾಖಲೆ ಇದ್ದರೆ ನೀಡಲಿ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಭಾರತೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಉಗ್ರ ಕಸಬ್ ಭಾರತೀಯ ಮೂಲದವನು ಎಂದು ವರದಿ ಮಾಡಿವೆ ಎಂದು ಪಾಕ್ ಸರ್ಕಾರ ವಾದಿಸತೊಡಗಿದೆ.
ಕಸಬ್ ಪಾಕಿಸ್ತಾನದವನು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಿತು. ಕಸಬ್ ಪಾಕಿಸ್ತಾನ ಮೂಲದವನು ಎನ್ನುವುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಹೀಗಿದ್ದಾಗ ಭಾರತ ವಿನಾಕಾರಣ ಪಾಕಿಸ್ತಾನದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕೈಬಿಡಬೇಕು ಎಂದು ಹೇಳಿದೆ.
ಮುಂಬೈ ದಾಳಿಯ ನಂತರ ಮುಂಬೈ ಪೊಲೀಸರು ನಡೆಸಿದ ವಿಚಾರಣೆಯ ಸಂಪೂರ್ಣ ವರದಿ ಹಾಗೂ ಕಸಬ್ ತನ್ನ ತಾಯ್ನಾಡು ಪಾಕಿಸ್ತಾನದ ಪಂಜಾಬ ಪ್ರಾಂತ್ಯದ ಫರೀದ್ ಕೋಟ್ ನಲ್ಲಿರುವ ತನ್ನ ತಾಯಿಗೆ ಬರೆದಿರುವ ಪತ್ರವನ್ನು ಭಾರತದ ವಿದೇಶಾಂಗ ಇಲಾಖೆ ಅಗತ್ಯ ಸಾಕ್ಷಿಗಳೆಂದು ಪಾಕಿಸ್ತಾನಕ್ಕೆ ನೀಡಿತ್ತು.
(ದಟ್ಸ್
ಕನ್ನಡ
ವಾರ್ತೆ)
ಪಾಕ್
ಗೆ
ಸಾಕ್ಷ್ಯಾಧಾರಗಳನ್ನು
ನೀಡಿದ್ದೇವೆ:
ಪ್ರಣಬ್