ಪಾಕ್ ವಿರುದ್ಧ ಸೇನಾ ಕಾರ್ಯಚರಣೆ ಇಲ್ಲ
ನವದೆಹಲಿ, ಡಿ. 16 : ಮುಂಬೈ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡ ಸ್ಪಷ್ಟವಾದರೂ ಕೂಡ ಪಾಕ್ ವಿರುದ್ಧ ಸೇನಾ ಕಾರ್ಯಚರಣೆ ನಡೆಸುವುದಿಲ್ಲ ಎಂದು ಕೇಂದ್ರದ ರಕ್ಷಣಾ ಖಾತೆ ಸಚಿವ ಎ ಕೆ ಎಂಟನಿ ತಿಳಿಸಿದ್ದಾರೆ.
ಮಂಗಳವಾರ ಸಿಎನ್ಎನ್ ವಾರ್ತಾ ವಾಹಿನಿಗೆ ಸಂದರ್ಶನ ನೀಡಿದ ಎಂಟನಿ, ಉಗ್ರ ದಮನವನ್ನು ಪಾಕಿಸ್ತಾನವೇ ಮಾಡಲಿ ಎಂದರು. ನೆರೆ ರಾಷ್ಟ್ರದ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಉದ್ದೇಶ ಸರ್ಕಾರದ ಮುಂದೆ ಇಲ್ಲ. ಆದರೆ, ಸೇನಾ ಕಾರ್ಯಾಚರಣೆ ನಡೆಸದಿರುವುದು ಭಾರತದ ಬಲಹೀನತೆಯಲ್ಲ. ಭಾರತ ಹಾಗೂ ಭಾರತೀಯ ಸಾರ್ವಭೌಮತೆಗೆ ಅಪಾಯ ಎದುರಾದಲ್ಲಿ ಭಾರತ ಸರ್ಕಾರ ಎಂತಹ ಕ್ರಮ ಕೈಗೊಳ್ಳಲು ಹಿಂದೆ ಮುಂದು ನೋಡುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದರು. ಮುಂಬೈ ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಉಗ್ರರಿಗೆ ಪಾಕಿಸ್ತಾನ ಸರ್ಕಾರ ಶಿಕ್ಷೆ ವಿಧಿಸಬೇಕು ಎಂದು ಎಂಟನಿ ಒತ್ತಾಯಿಸಿದರು.
ಮುಂಬೈ ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಉಗ್ರರು ಸೇರಿದಂತೆ ಪಾಕಿಸ್ತಾನದಲ್ಲಿ ಅಡಗಿರುವ ಭಾರತದ ಮೋಸ್ಟ್ ವಾಂಟೆಡ್ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಭಾರತ ಸರ್ಕಾರ ಪಾಕಿಸ್ತಾನಕ್ಕೆ ಅನೇಕ ಸಲ ಹೇಳುತ್ತಲೇ ಬಂದಿದೆ. ತಪ್ಪನ್ನು ಒಪ್ಪಿಕೊಳ್ಳದ ಪಾಕಿಸ್ತಾನ ವಿನಾಕಾರಣ ಕಾಲಹರಣ ಮಾಡತೊಡಗಿದೆ. ಅಲ್ಲದೇ ವಿಶ್ವಸಮುದಾಯದಿಂದ ಒತ್ತಡ ಬಂದರೂ ಕೂಡ ಪಾಕ್ ಸರ್ಕಾರ ತನ್ನ ಮೊಂಡು ವಾದವನ್ನು ಬಿಡುತ್ತಿಲ್ಲ ಎಂದು ಎಂಟನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಮಂತ್ರಿ ಗಾರ್ಡನ್ ಬ್ರೌನ್ ಮುಂಬೈ ಭಯೋತ್ಪಾದನೆ ಬಲವಾಗಿ ಖಂಡಿಸಿದ್ದರು. ಭಾರತ ನಡೆಸುವ ಎಲ್ಲ ತನಿಖೆಗೆ ಅವಕಾಶ ನೀಡಬೇಕು ಎಂದು ಪಾಕ್ ಗೆ ಸೂಚನೆ ನೀಡಿದ್ದರು. ಹಾಗೂ ಉಗ್ರರಿಗೆ ಶಿಕ್ಷಿಸಬೇಕು ಎಂದು ಅವರು ಹೇಳಿದ್ದರು. ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಅನುಮತಿ ನೀಡಿದರೆ ಮುಂಬೈ ದಾಳಿ ಪ್ರಕರಣವನ್ನು ಬ್ರಿಟನ್ ತನಿಖೆ ನಡೆಸಲಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಕ್ ಪ್ರಧಾನಿ ಯೂಸೆಫ್ ರಾಜಾ ಗಿಲಾನಿ, ಪಾಕ್ ಸರ್ಕಾರ ಅಗತ್ಯ ತನಿಖೆ ನಡೆಸಲಿದೆ. ಮುಂಬೈ ದಾಳಿಕೋರರನ್ನು ಪಾಕ್ ಸಂವಿಧಾನದ ಪ್ರಕಾರ ಶಿಕ್ಷೆ ನೀಡುತ್ತೇವೆ ಎಂದು ಹೇಳಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಪಾಕ್ ನಿಂದ ಲಾಡೆನ್ ಗೆ ಅಣ್ವಸ್ತ್ರ ಮಾರಾಟ?
ಮುಂಬೈ ಭಯೋತ್ಪಾದನೆಗೆ ಲಷ್ಕರ್ ಕಾರಣ: ಬ್ರಿಟನ್
ಉಗ್ರರ ಹಸ್ತಾಂತರ ಖಂಡಿತ ಸಾಧ್ಯವಿಲ್ಲ, ಗಿಲಾನಿ












Click it and Unblock the Notifications