ಹ್ಯಾಟ್ರಿಕ್ ಗೆಲುವು ಸಾಧಿಸಿದ ಶೀಲಾ ದೀಕ್ಷಿತ್
ನವದೆಹಲಿ, ಡಿ. 8 : ಸತತವಾಗಿ ಮೂರನೆ ಬಾರಿಗೆ ಕಾಂಗ್ರೆಸ್ ಜಯ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗಿದೆ. ಇದರೊಂದಿಗೆ ದೆಹಲಿಯ ಅಧಿಕಾರ ಚುಕ್ಕಾಣಿಯನ್ನು 77 ವರ್ಷದ ಶೀಲಾ ದೀಕ್ಷಿತ್ ಮತ್ತೊಮ್ಮೆ ಸಿಎಂ ಹುದ್ದೆ ಏರುವುದು ಬಹುತೇಕ ಖಚಿತವಾಗಿದೆ.
ಗೆಲುವಿನ ನಂತರ ಪ್ರತಿಕ್ರಿಯಿಸಿದ ದೀಕ್ಷಿತ್, ಮತದಾರರು ಮತ್ತೊಮ್ಮೆ ತಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳನ್ನು ಹೇಳಿದ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಇನ್ನಷ್ಟು ಕೆಲಸ ಮಾಡಲು ಜನರು ನಮಗೆ ಮತ ನೀಡಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಜನರ ಭರವಸೆ ಉಳಿಸಿಕೊಂಡು ಹೋಗುವುದಾಗಿ ಹೇಳಿದರು.
ಕಾಂಗ್ರೆಸ್ ಐಕ್ಯತೆ, ಸಮಗ್ರತೆ ಹಾಗೂ ಜಾತ್ಯಾತೀಯತೆಯಡಿಯಲ್ಲಿ ಕಣಕ್ಕೆ ಇಳಿಯಿತು. ಆದರೆ ಬಿಜೆಪಿ ಭಯೋತ್ಪಾದನೆಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿತು. ಆದರೆ ಮತದಾರ ಕೋಮುವಾದಿ ಬಿಜೆಪಿಯನ್ನು ಮತ್ತೆ ಸೋಲಿಸಿದ್ದಾನೆ. ಇದರಿಂದಲಾದರೂ ಆ ಪಕ್ಷದ ನಾಯಕರು ಪಾಠ ಕಲಿಯಬೇಕಿದೆ ಎಂದು ಕುಟುಕಿದರು. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ವಿಜಯಕುಮಾರ್ ಮಲ್ಹೋತ್ರಾ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ದಿಕ್ಷೀತ್ ನಿರಾಕರಿಸಿದರು.
ದೆಹಲಿ ವಿಧಾನಸಭಾ ಮತಎಣಿಕೆಯಲ್ಲಿ ಕಾಂಗ್ರೆಸ್ನ ಮುಖೇಶ್ ಶರ್ಮಾ ಅವರ ಗೆಲುವಿನ ಘೋಷಣೆಯೊಂದಿಗೆ ಕಾಂಗ್ರೆಸ್ ತನ್ನ ಖಾತೆ ತೆರೆದಿಯಿತು.ದೆಹಲಿ ಬಿಜೆಪಿ ಅಧ್ಯಕ್ಷ ಹರ್ಷವರ್ಧನ್, ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ವಿ.ಕೆ. ಮಲ್ಹೋತ್ರ ಜಯಗಳಿಸಿದ್ದಾರೆ. ಕಾಂಗ್ರೆಸ್ ನಿಂದ ಶೀಲಾ ದೀಕ್ಷಿತ್, ಮಹಾಬಲ್ ಮಿಶ್ರ, ತರವಿಂದರ್ ಸಿಂಗ್, ಎ.ಕೆ. ವಾಲಿಯ, ಯೋಗಾನಂದ ಶಾಸ್ತ್ರಿ ಸೇರಿದಂತೆ ಅನೇಕ ಹಿರಿಯ ಮುಖಗಳು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮಧ್ಯಪ್ರದೇಶ: ಕೇಸರಿಗೆ ಜೈ; ಕೈ ವಶಕ್ಕೆ ರಾಜಸ್ತಾನ












Click it and Unblock the Notifications